ಹೊಸ ವರ್ಷ ಭಾಷಣ: ಪ್ರಧಾನಿ ಮೋದಿಯಿಂದ ನೂತನ ಯೋಜನೆಗಳ ಘೋಷಣೆ

ಹೊಸ ವರ್ಷದ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ರವರು ಕಪ್ಪು ಹಣದ ವಿರುದ್ದ ಹೋರಾಡಲು ಕೇಂದ್ರ ಸರ್ಕಾರ ಕೈಗೊಂಡ ನೋಟು ರದ್ದತಿ ತೀರ್ಮಾನವನ್ನು ಬೆಂಬಲಿಸಿ ಕಪ್ಪುಹಣ ಪಿಡುಗು ನಿರ್ಮೂಲನೆಗೆ ಕಠಿಣ ತ್ಯಾಗವನ್ನು ಮಾಡಿದ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಬಡವರು, ಗ್ರಾಮೀಣ ಜನರು ಹಾಗೂ ಸಣ್ಣ ಉದ್ಯಮಿಗಳಿಗೆ ಮತ್ತು ಸಾರ್ವಜನಿಕರಿಗೆ ನೋಟು ರದ್ದತಿ ಪರಿಣಾಮವನ್ನು ತಗ್ಗಿಸುವ ಸಲುವಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದರು.

ಪ್ರಮುಖಾಂಶಗಳು:

  • ಗ್ರಾಮೀಣ ಮತ್ತು ನಗರ ವಾಸಿ ಬಡವರಿಗೆ ವಸತಿ ಯೋಜನೆ: ನಗರ ಪ್ರದೇಶಗಳ ಬಡವರು 2017ರಲ್ಲಿ ಪಡೆಯುವ ರೂ 9 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಯಲ್ಲಿ ಶೇ 4 ರಷ್ಟು ಮನ್ನಾ. ರೂ 12 ಲಕ್ಷದವರೆಗಿನ ಸಾಲದ ಮೇಲಿನ ಶೇ 3 ರಷ್ಟು ಮನ್ನಾ. ಗ್ರಾಮೀಣ ಭಾಗದಲ್ಲಿ ಬಡವರು ಮನೆ ಕಟ್ಟಲು 2017ರಲ್ಲಿ ಪಡೆಯುವ ರೂ 2 ಲಕ್ಷದವರೆಗಿನ ಸಾಲದ ಮೇಲೆ ಶೇ 3 ರಷ್ಟು ಬಡ್ಡಿ ಮನ್ನಾ.
  • ರೈತರಿಗೆ: ಮುಂದಿನ ಮೂರು ತಿಂಗಳಲ್ಲಿ 3 ಕೋಟಿ ಕಿಸಾನ್ ಕಾರ್ಡ್ ಗಳನ್ನು ರುಪೇ ಕಾರ್ಡ್ ಗಳನ್ನಾಗಿ ಪರಿವರ್ತನೆ. ರೈತರು ಪಡೆಯುವ ಸಾಲದ ಮೇಲೆ 60 ದಿನಗಳ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಈಗಾಗಲೇ ನಬಾರ್ಡ್ ನಲ್ಲಿ ರೂ 21,000 ಕೋಟಿಗೆ ಹೆಚ್ಚುವರಿ ರೂ 20,000 ಕೋಟಿಯನ್ನು ನೀಡಲಿದ್ದು, ಸಹಕಾರಿ ಬ್ಯಾಂಕ್ ಗಳು ಹಾಗೂ ಸೊಸೈಟಿಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಬಹುದು.
  • ಸೂಕ್ಷ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳು: ಸೂಕ್ಷ, ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳು ಪಡೆಯುವ ರೂ 2 ಕೋಟಿ ಸಾಲಕ್ಕೆ ಸರ್ಕಾರವೇ ಖಾತ್ರಿದಾರ. ಸಣ್ಣ ಉದ್ದಿಮೆಗಳ ನಗದು ಸಾಲ ಮಿತಿಯನ್ನು ಈಗಿನ ಶೇ 20% ರಿಂದ ಶೇ 25% ರಷ್ಟಕ್ಕೆ ಹೆಚ್ಚಿಸಲು ಬ್ಯಾಂಕ್ ಗಳಿಗೆ ಸೂಚನೆ.
  • ಮಹಿಳೆಯರು ಮತ್ತು ಹಿರಿಯರು: 650 ಗ್ರಾಮೀಣ ಪ್ರದೇಶದ ಜಿಲ್ಲೆಗಳಲ್ಲಿನ ಗರ್ಭೀಣಿಯರು ಮತ್ತು ಬಾಣಂತಿಯರಿಗೆ ರೂ 6000 ಸಹಾಯ ಧನವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುವುದು. ವೈದ್ಯಕೀಯ ವೆಚ್ಚವನ್ನು ಭರಿಸುವುದು ಹಾಗೂ ಶಿಶು ಮತ್ತು ತಾಯಂದಿರ ಮರಣ ಪ್ರಮಾಣ ತಗ್ಗಿಸುವುದು ಇದರ ಉದ್ದೇಶ. ಹಿರಿಯ ನಾಗರಿಕರು 10 ವರ್ಷಗಳ ಅವಧಿಗೆ ಇಡುವ ರೂ 7.5 ಲಕ್ಷದವರೆಗಿನ ಠೇವಣಿಗೆ ಶೇ.8% ಬಡ್ಡಿ.

ಪರಮಾಣು ನೆಲೆ ಮತ್ತು ಸೌಲಭ್ಯಗಳ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡ ಭಾರತ-ಪಾಕಿಸ್ತಾನ

ಭಾರತ ಮತ್ತು ಪಾಕಿಸ್ತಾನ ತಮ್ಮ ಪರಮಾಣು ನೆಲೆ ಮತ್ತು ಸೌಲಭ್ಯಗಳ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡವು. ಉಭಯ ದೇಶಗಳ ನಡುವಿನ ಪರಮಾಣು ನೆಲೆ ಮೇಲೆ ದಾಳಿ ತಡೆಯುವ ಒಪ್ಪಂದದ ಅನ್ವಯ ಈ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಜನವರಿ 1, 1992 ರಿಂದ ಮಾಹಿತಿ ವಿನಿಮಯವನ್ನು ಮಾಡಿಕೊಳ್ಳಲಾಗುತ್ತಿದ್ದು, ಈ ವರ್ಷ 26ನೇ ಬಾರಿಗೆ ವಿನಿಮಯ ಮಾಡಿಕೊಳ್ಳಲಾಯಿತು.  ಅಲ್ಲದೇ ಎರಡು ದೇಶಗಳು ಉಭಯ ದೇಶಗಳ ಜೈಲಿನಲ್ಲಿರುವ ತಮ್ಮ ನಾಗರಿಕರ (ಮೀನುಗಾರರು ಮತ್ತು ಖೈದಿಗಳು) ಬಗ್ಗೆ ಮಾಹಿತಿಯನ್ನು ದೂತವಾಸ ಪ್ರವೇಶ ಒಪ್ಪಂದ (Agreement on Consular access) ಸಹ ವಿನಿಮಯ ಮಾಡಿಕೊಂಡವು.

ಏನಿದು ಒಪ್ಪಂದ:

  • ಉಭಯ ದೇಶಗಳ ನಡುವೆ ಪರಮಾಣು ನೆಲೆ ಮತ್ತು ಸೌಲಭ್ಯಗಳ ಮೇಲೆ ನಡೆಯಬಹುದಾದ ಹಠಾತ್ ದಾಳಿಯನ್ನು ತಡೆಯಲು ಈ ದ್ವಿಪಕ್ಷೀಯ ಒಪ್ಪಂದದಕ್ಕೆ ಸಹಿ ಹಾಕಲಾಗಿದೆ.
  • ಈ ಒಪ್ಪಂದದ ಅನ್ವಯ ಪ್ರತಿ ವರ್ಷ ಜನವರಿ 1 ರಂದು ಎರಡು ದೇಶಗಳಲ್ಲಿರುವ ಪರಮಾಣು ನೆಲೆ ಮತ್ತು ಸೌಲಭ್ಯದ ಮಾಹಿತಿಯನ್ನು ಹಂಚಿಕೊಳ್ಳಬೇಕು.
  • ಈ ಒಪ್ಪಂದಕ್ಕೆ ಡಿಸೆಂಬರ್ 31, 1988 ರಲ್ಲಿ ಸಹಿ ಹಾಕಲಾಗಿದ್ದು, ಜನವರಿ 27, 1991 ರಿಂದ ಜಾರಿಗೆ ಬಂದಿದೆ. ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿ ಮತ್ತು ಪಾಕಿಸ್ತಾನದ ಪ್ರತಿನಿಧಿ ಬೆನಝೀರ್ ಭುಟ್ಟೊರವರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ದೂತವಾಸ ಪ್ರವೇಶ ಒಪ್ಪಂದ:

  • ಈ ಒಪ್ಪಂದಕ್ಕೆ ಮೇ 21, 2008ರಲ್ಲಿ ಸಹಿಹಾಕಲಾಯಿತು. ಈ ಒಪ್ಪಂದದ ಪ್ರಕಾರ ಎರಡು ದೇಶಗಳ ಜೈಲಿನಲ್ಲಿರುವ ನಾಗರಿಕರ ಬಗ್ಗೆ ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ 1 ಮತ್ತು ಜುಲೈ 1 ರಂದು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು.

ಆರ್ಮಿ ಆಫ್ ಚೀಫ್ ಸ್ಟಾಫ್ ಆಗಿ ಬಿಪಿನ್ ರಾವತ್ ಅಧಿಕಾರ ಸ್ವೀಕಾರ

ಲೆಫ್ಟಿನೆಂಟ್ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡರು. ಜನರಲ್ ದಲ್ಬೀರ್ ಸಿಂಗ್ ಸುಹಾಗ್ ರವರು ಸೇವೆಯಿಂದ ನಿವೃತ್ತರಾದ ಕಾರಣ ಅವರ ಉತ್ತರಾಧಿಕಾರಿಯಾಗಿ ರಾವತ್ ಅಧಿಕಾರವನ್ನು ವಹಿಸಿಕೊಂಡರು. ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ರಾವತ್‌ ಅವರು, ಇಬ್ಬರು ಹಿರಿಯ ಅಧಿಕಾರಿಗಳನ್ನು  (ಅತ್ಯಂತ ಹಿರಿಯ ಸೇನಾ ಕಮಾಂಡರ್‌, ಪೂರ್ವ ಕಮಾಂಡ್‌ನ ಮುಖ್ಯಸ್ಥ ಪ್ರವೀಣ್‌ ಬಕ್ಷಿ ಮತ್ತು ದಕ್ಷಿಣ ಕಮಾಂಡ್‌ನ ಮುಖ್ಯಸ್ಥ ಪಿ.ಎಂ. ಹರಿಜ್‌) ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಿದ್ದಾರೆ.

ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್:

  • ಬಿಪಿನ್ ರಾವತ್ ಜನಿಸಿದ್ದು ಯೋಧರ ಕುಟುಂಬದಲ್ಲಿ.  ಬಿಪಿನ್ ರಾವತ್ ತಂದೆ ಲೆ|ಜ| ಎಲ್.ಎಸ್. ರಾವತ್ ಕೂಡಾ ಸೇನೆಯಲ್ಲಿ ಸೇವೆ ಸಲ್ಲಿಸಿದವರು.
  • ‘ಇಂಡಿಯನ್ ಮಿಲಿಟರಿ ಅಕಾಡೆಮಿ’ಯಲ್ಲಿ 1978ರಲ್ಲಿ ತರಬೇತಿ ಪಡೆದು ಉತ್ತೀರ್ಣರಾಗುವಾಗಿ ಅಲ್ಲಿ ‘ಸೋರ್ಡ್ ಆಫ್ ಆನರ್’ ಗೌರವಕ್ಕೆ ಪಾತ್ರರಾದರು.
  • 1978ರಲ್ಲಿ 11 ಗೋರ್ಖಾ ರೈಫಲ್ಸ್’ನ 5ನೇ ಬೆಟಾಲಿಯನ್’ಗೆ ಸೇರಿ ಸೇವೆ ಆರಂಭ. 37 ವರ್ಷಗಳ ಸೇವೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ, ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಣೆ. ಭಾರತದ ಪೂರ್ವ ಗಡಿ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ.
  • ಈ ಮಧ್ಯೆ ವಿಶ್ವಸಂಸ್ಥೆಯ ಮಿಶನ್ ಮೇಲೆ ಕಾಂಗೋದಲ್ಲಿ ಕಠಿಣ ಸವಾಲುಗಳ ನಡುವೆಯೂ ಅಪ್ರತಿಮ ಸೇವೆ ಸಲ್ಲಿಸಿ ಅಂತರಾಷ್ಟ್ರೀಯ ಗೌರವಗಳಿಗೆ ಪಾತ್ರವಾಗಿದ್ದಾರೆ. ಭಾರತದಲ್ಲಿಯೂ ಹಲವಾರು ಗೌರವ ಹಾಗೂ ಶೌರ್ಯ ಪ್ರಶಸ್ತಿಗಳಿಗೆ ಭಾಜನ. 1 ಜನವರಿ 2016ರಿಂದ ಭೂಸೇನೆಯ ಉಪ-ಮುಖ್ಯಸ್ಥನಾಗಿ ಅಧಿಕಾರ ಸ್ವೀಕಾರ
  • 17 ಡಿಸೆಂಬರ್ 2016ಗೆ ನೂತನ ಭೂಸೇನಾ ಮುಖ್ಯಸ್ಥರಾಗಿ ನೇಮಕ.

ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಸುರೇಖಾ ಮರಾಂಡಿ ನೇಮಕ

 ಭಾರತೀಯ ರಿಸರ್ವ್ ಬ್ಯಾಂಕ್ ಸುರೇಖಾ ಮರಾಂಡಿ ಅವರನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿಯನ್ನಾಗಿ ನೇಮಕಮಾಡಿದೆ. ಯು.ಎಸ್.ಪಾಲಿವಾಲ್ ರವರು ಡಿಸೆಂಬರ್ 31, 2016 ರಂದು ನಿವೃತ್ತರಾದ ಕಾರಣ ಅವರ ಸ್ಥಾನಕ್ಕೆ ಸುರೇಖಾ ಅವರನ್ನು ನೇಮಕಮಾಡಲಾಗಿದೆ. ಸುರೇಖಾ ಅವರು ಗ್ರಾಹಕ ಶಿಕ್ಷಣ ಮತ್ತು ಭದ್ರತೆ ಇಲಾಖೆ ಹಾಗೂ ಆರ್ಥಿಕ ಸೇರ್ಪಡೆ ಮತ್ತು ಅಭಿವೃದ್ದಿ ಇಲಾಖೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಸುರೇಖಾ ಮರಾಂಡಿ:

  • ಈ ನೇಮಕಾತಿಗೆ ಮುಂಚೆ ಸುರೇಖಾ ಅವರು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಚೀಫ್ ಜನರಲ್ ಮ್ಯಾನೇಜರ್ ಹಾಗೂ ಮುಖ್ಯ ಜಾಗೃತಿ ಅಧಿಕಾರಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.
  • ಆರ್ಥಿಕ ಸೇರ್ಪಡೆ ಮತ್ತು ಅಭಿವೃದ್ದಿ, ಮಾನವ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿರುವ ಅಪಾರ ಅನುಭವವನ್ನು ಹೊಂದಿದ್ದಾರೆ.
  • ಯುನೈಟೆಡ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಮಂಡಳಿಯಲ್ಲಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಜಾಧವ್ ಪುರ ವಿಶ್ವವಿದ್ಯಾಲಯದಿಂದ ಇವರು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ 11 ಕಾರ್ಯನಿರ್ವಾಹಕ ನಿರ್ದೇಶಕರನ್ನು ಒಳಗೊಂಡಿದ್ದು, ವಿವಿಧ ಇಲಾಖೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಇಮ್ತಿಯಾಜ್ ಅಹ್ಮದ್ ನಿಧನ

ಪಾಕಿಸ್ತಾನದ ಅತ್ಯಂತ ಹಿರಿಯ ಕ್ರಿಕೆಟಿಗ ಎನಿಸಿದ್ದ ಇಮ್ತಿಯಾಜ್‌ ಅಹ್ಮದ್‌ ಅವರು ಕೊನೆಯುಸಿರೆಳದರು. ಅಹ್ಮದ್ ಅವರು ಹತ್ತು ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.

  • ಇಮ್ತಿಯಾಜ್ ಅಹ್ಮದ್ ರವರು 41 ಟೆಸ್ಟ್‌ ಮತ್ತು 180 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ.
  • 1952ರ ಅಕ್ಟೋಬರ್‌ 16ರಂದು ಪಾಕಿಸ್ತಾನ ತಂಡ ತನ್ನ ಮೊದಲ ಟೆಸ್ಟ್‌ ಪಂದ್ಯವನ್ನು ದೆಹಲಿಯ ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣ ದಲ್ಲಿ ಆಡಿದ್ದ ತಂಡದಲ್ಲಿ ಇಮ್ತಿಯಾಜ್‌ ಅವರು ತಂಡದಲ್ಲಿದ್ದರು.
  • ಇಮ್ತಿಯಾಜ್‌ ಅವರು 1944–45ರಿಂದ 1972–73ರವರೆಗೆ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದ್ದರು.
  • ವಿಕೆಟ್‌ ಕೀಪರ್‌ ಆಗಿದ್ದ ಇಮ್ತಿಯಾಜ್‌  ಟೆಸ್ಟ್‌ನಲ್ಲಿ ಒಟ್ಟು 2079 ರನ್ ಕಲೆ ಹಾಕಿದ್ದರು. ಮೂರು ಶತಕ ಹಾಗೂ 11 ಅರ್ಧಶತಕಗಳನ್ನು ಬಾರಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ 10391 ರನ್ ಗಳಿಸಿದ್ದರು.

3 Thoughts to “ಪ್ರಚಲಿತ ವಿದ್ಯಮಾನಗಳು-ಜನವರಿ-2,2017”

  1. Current day wise information not download can feeling wel

  2. Every one download option can given sir/madam otherwise no usefull 1st download option is their but one week no option

Leave a Comment

This site uses Akismet to reduce spam. Learn how your comment data is processed.