ಪುಣೆಯಲ್ಲಿ ದೇಶದ ಮೊದಲ ಬಯೋ-ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (Bio-CNG) ಉತ್ಪಾದನ ಘಟಕ

ದೇಶದ ಮೊದಲ ಬಯೋ-ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಉತ್ಪಾದನ ಘಟಕ ಪುಣೆಯಲ್ಲಿ ಕಾರ್ಯಾರಂಭಗೊಂಡಿತು. ಕೃಷಿ ತ್ಯಾಜ್ಯವನ್ನು ಬಳಸಿ ಅನಿಲ ಉತ್ಪಾದಿಸುವ ಈ ಘಟಕವನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಣಿಕ್ಕರ್ ಜಂಟಿಯಾಗಿ ಉದ್ಘಾಟಿಸಿದರು.

ಈ ಘಟಕದ ಬಗ್ಗೆ:

  • ಪುಣೆ ಮೂಲದ ಪ್ರೈಮೊವ್ ಎಂಜನಿಯರಿಂಗ್ ಪ್ರೈವೆಟ್ ಲಿಮಿಟೆಡ್ ಈ ಘಟಕವನ್ನು ಸ್ಥಾಪಿಸಿದೆ. ತಂತ್ರಜ್ಞಾನ ಪ್ರದರ್ಶಿಸಲು ನಿರ್ಮಿಸಲಾಗಿರುವ ಈ ಘಟಕವನ್ನು ಅತಿ ಸುಲಭವಾಗಿ ಬೇಕೆಂದ ಕಡೆ ನಿರ್ಮಿಸಬಹುದಾಗಿದೆ.
  • ಕೃಷಿ ತ್ಯಾಜ್ಯವನ್ನು ವಿಶೇಷ ಬ್ಯಾಕ್ಟಿರೀಯಾ ದ್ರಾವಕ ಬಳಸಿ ಕೊಳಸುವ ಮೂಲಕ ಅನಿಲವನ್ನು ಉತ್ಪಾದಿಸಲಾಗುವುದು. ಬಳಿಕ ಅನಿಲವನ್ನು ಶುದ್ದೀಕರಿಸಿ, ಕಂಪ್ರೆಸ್ ಮಾಡಿ ವಾಹನಗಳಲ್ಲಿ ಇಂಧನವಾಗಿ ಬಳಸಬಹುದುದಾಗಿದೆ.

ಜೈವಿಕ ಇಂಧನದ ಮಹತ್ವ:

  • ಜೈವಿಕ ಇಂಧನದ ಬಳಕೆಯಿಂದ ಶೇ 50% ಡೀಸೆಲ್ ಆಮದನ್ನು ಕಡಿಮೆ ಮಾಡಬಹುದಾಗಿದೆ. ಆ ಮೂಲಕ ಬೃಹತ್ ಮೊತ್ತದ ವಿದೇಶಿ ವಿನಿಮಯ ಉಳಿತಾಯವಾಗಲಿದೆ. ಎಲ್ಲದಕ್ಕಿಂತ ಮಿಗಿಲಾಗಿ ಜೈವಿಕ ಇಂಧನವನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದ್ದು, ಪರಿಸರ ಸ್ನೇಹಿಯಾಗಿದೆ.
  • ಇಂತಹ ಯೋಜನೆಗಳು ಭಾರತದ ಪ್ರಮುಖ ಯೋಜನೆಯಾದ ಮೇಕ್ ಇನ್ ಇಂಡಿಯಾಗೆ ಸ್ಪೂರ್ತಿಯಾಗಿದೆ. ಕೃಷಿ ದೇಶವಾದ ಭಾರತದಲ್ಲಿ ಕೃಷಿ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಿಗಿದ್ದು, ಈ ಅನ್ವೇಷಣೆ ಹೊಸ ಕ್ರಾಂತಿ ಮಾಡಲಿದೆ.

10 ನಗರಗಳಲ್ಲಿ ಮೊದಲ ಹಂತದ ಸ್ಮಾರ್ಟ್ ಗಂಗಾ ನಗರ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದಿಂದ ಚಾಲನೆ

ಮೊದಲ ಹಂತದ ಸ್ಮಾರ್ಟ್ ಗಂಗಾ ನಗರ ಕಾರ್ಯಕ್ರಮವನ್ನು ಗಂಗಾ ನದಿಯ ದಡದ ಮೇಲಿರುವ 10 ನಗರಗಳಲ್ಲಿ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕೇಂದ್ರ ನಗರಾಭಿವೃದ್ದಿ ಸಚಿವ ವೆಂಕಯ್ಯನಾಯ್ಡು ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಮೊದಲ ಹಂತದ ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿದರು.

10 ನಗರಗಳು:

  • ಹರಿದ್ವಾರ, ರಿಷಿಕೇಶ್, ಮಥುರಾ, ವಾರಾಣಾಸಿ, ಕಾನ್ಪುರ, ಅಲಹಬಾದ್, ಲಕ್ನೋ, ಪಾಟ್ನಾ, ಸಾಹೀಬ್ ಗಂಜ್ ಮತ್ತು ಬಾರಕ್ ಪುರ.
  • ಈ ಕಾರ್ಯಕ್ರಮದಡಿ ನಗರಗಳಲ್ಲಿ ಕೊಳಚೆ ನೀರು ಶುದ್ದೀಕರಣ ಘಟಕ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ದಿಪಡಿಸಲಾಗುವುದು.
  • ಇದಕ್ಕೆ ತಗಲುವ ವೆಚ್ಚದ ಶೇ 40% ಕೇಂದ್ರ ಸರ್ಕಾರ ಭರಿಸಲಿದ್ದು, ಉಳಿದ ಮೊತ್ತವನ್ನು ಒಪ್ಪಂದ ಮಾಡಿಕೊಂಡ ಖಾಸಗಿ ಸಂಸ್ಥೆ ಭರಿಸಲಿದೆ.

ಜಾರ್ಖಂಡ್ ನಲ್ಲಿ ದೇಶದ ಮೊದಲ ನಿಕ್ಕಲ್ (Nickel )ಉತ್ಪಾದನ ಘಟಕ ಸ್ಥಾಪನೆ

ದೇಶದ ಮೊದಲ ನಿಕ್ಕಲ್ ಉತ್ಪಾದನ ಘಟಕವನ್ನು ಜಾರ್ಖಂಡ್ ನಲ್ಲಿ ಸ್ಥಾಪಿಸಲಾಗಿದೆ. ಜಾರ್ಖಂಡ್ ನ ಘಾಟ್ ಶಿಲದಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ನ ಇಂಡಿಯನ್ ಕಾಪರ್ ಕಾಂಪ್ಲೆಕ್ಸ್ ನಲ್ಲಿ ಈ ಘಟಕ ಕಾರ್ಯರಂಭ ಮಾಡಿದೆ. ಈ ಹೊಸ ನಿಕ್ಕಲ್,ಕಾಪರ್ ಮತ್ತು ಆಮ್ಲ ಮರುಬಳಕೆ ಘಟಕದಲ್ಲಿ ತಯಾರಾಗಲಿರುವ ನಿಕ್ಕಲ್ ಲೋಹವು ಲಂಡನ್ ಮೆಟಲ್ ಎಕ್ಸ್ಚೆಂಜ್ ಗುಣಮಟ್ಟಕ್ಕೆ ಸಮನಾಗಿರಲಿದೆ.

  • ಆರಂಭದಲ್ಲಿ ಈ ಘಟಕವು ವಾರ್ಷಿಕ 50 ಟನ್ ನಿಕ್ಕಲ್ ಲೋಹವನ್ನು ಉತ್ಪಾದಿಸಲಿದೆ. ಆದರೆ ಮುಂದಿನ ದಿನಗಳಲ್ಲಿ ಎಂಟು ಪಟ್ಟು ಹೆಚ್ಚು ನಿಕ್ಕಲ್ ಅನ್ನು ಇಲ್ಲಿ ಉತ್ಪಾದಿಸಲಾಗುವುದು.
  • ಪರಿಸರ-ಸ್ನೇಹಿ ತಂತ್ರಜ್ಞಾನದ ಮೂಲಕ ಈ ಘಟಕ ಕಾರ್ಯನಿರ್ವಹಿಸಲಿದೆ. ಆ ಮೂಲಕ ಪರಿಸರ ಮಾಲಿನ್ಯ, ಸೀಸದ ಬಳಕೆ ಸೇರಿದಂತೆ ಘನ ತ್ಯಾಜ್ಯ ವಿಲೇವಾರಿ ಶೇ 75% ನಿವಾರಣೆಯಾಗಲಿದೆ.
  • ಮಾಹಿತಿ ಪ್ರಕಾರ ಈ ಘಟಕವು ಕಡಿಮೆ ಇಂಧನ ಬಳಕೆ ಮಾಡಲಿದ್ದು, ಸುರಕ್ಷಿತ ಕೆಲಸದ ವಾತಾವರಣ ಹೊಂದಿದ್ದು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕೂಡ ಆಗಲಿದೆ.
  • ಪ್ರಸ್ತುತ ಭಾರತದಲ್ಲಿ ವಾರ್ಷಿಕ 45,000 ಮೆಟ್ರಿಕ್ ಟನ್ ನಿಕ್ಕಲ್ ಬೇಡಿಕೆ ಇದೆ. ದೇಶದಲ್ಲಿ ನಿಕ್ಕಲ್ ಬೇಡಿಕೆಯನ್ನು ಆಮದಿನ ಮೂಲಕ ಪೂರೈಸಲಾಗುತ್ತಿದೆ. ಈ ಘಟಕದ ನಿರ್ಮಾಣದಿಂದ ಭಾರತ ನಿಕ್ಕಲ್ ಲೋಹಕ್ಕಾಗಿ ಪರದೇಶಗಳ ಮೇಲೆ ಅವಲಂಭಿತವಾಗುವುದು ತಪ್ಪಲಿದೆ.

3 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 15, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.