ರಾಷ್ಟ್ರಕವಿ ಗೋವಿಂದ ಪೈ ಅವರ “ಗಿಳಿವಿಂಡು” ಸ್ಮಾರಕ ಭವನ ಲೋಕಾರ್ಪಣೆ

ಕನ್ನಡದ ಮೊದಲ ರಾಷ್ಟ್ರಕವಿ ಮಹಾನ್ ಸಾಹಿತಿ ಮಂಜೇಶ್ವರ ಗೋವಿಂದ ಪೈ ಅವರ ನೆನಪಿನ ಸ್ಮಾರಕ ಗಿಳಿವಿಂಡು ವನ್ನು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ಸರಕಾರದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರು ಲೋಕಾರ್ಪಣೆ ಮಾಡಿದರು. ರಾಷ್ಟ್ರಕವಿ ಗೋವಿಂದ ಪೈ ಅವರ ಗೌರವಾರ್ಥ ಅವರ ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ದಲ್ಲಿ ಕರ್ನಾಟಕ,ಕೇರಳ ಹಾಗೂ ಕೇಂದ್ರ ಸರಕಾರ ಮತ್ತು ಇತರ ದಾನಿಗಳ ಸಹಕಾರ, ಸಹಯೋಗದೊಂದಿಗೆ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

ಮಂಜೇಶ್ವರ ಗೋವಿಂದ ಪೈ:

  • ಗೋವಿಂದ ಪೈಯವರು 1883ರಲ್ಲಿ ಆಗಿನ ಕರ್ನಾಟಕದ ಭಾಗವಾಗಿದ್ದ ಕಾಸರಗೋಡಿನ ಮಂಜೇಶ್ವರದಲ್ಲಿ ಜನಿಸಿದ್ದರು.
  • ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಅವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಇಂಟರ್‍ಮೀಡಿಯೆಟ್ಟಿನವರೆಗೆ ಶಿಕ್ಷಣ ಪಡೆದರು. ಖ್ಯಾತ ನವೋದಯ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದ ಪಂಜೆ ಮಂಗೇಶರಾಯರು ಇವರಿಗೆ ಕನ್ನಡದ ಅಧ್ಯಾಪಕ ರಾಗಿದ್ದ ರು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ ತೆರಳಿದರು. ನಂತರ ಪೈಯವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು.
  • ಕನ್ನಡ ಸಾಹಿತ್ಯದಲ್ಲಿ ನಡುಗನ್ನಡ ಪ್ರಕಾರವನ್ನು ಬೆಳಕಿಗೆ ತಂದ ಮಂಜೇಶ್ವರ ಗೋವಿಂದ ಪೈಗಳು ಅಗಾಧ ಪಾಂಡಿತ್ಯವನ್ನು ಹೊಂದಿದ್ದವರು. ಸಂಸ್ಕೃತ, ಪಾಲಿ, ಗ್ರೀಕ್, ಲ್ಯಾಟಿನ್ ಭಾಷೆ ಸೇರಿದಂತೆ 23 ಭಾಷೆಗಳ ಬಗ್ಗೆ ಜ್ಞಾನ ಹೊಂದಿದ್ದ ಬಹು ಭಾಷಾ ಪಂಡಿತರಾಗಿದ್ದರು. ಮ್ಯಾಕ್ಸ್ಮುಲ್ಲರ್ನ ರೀತಿಯ ಚಿಂತನೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಗಾಂಧಿ ದಂಡಿ ಸತ್ಯಾಗ್ರಹಕ್ಕೆ ಹೊರಟಾಗ ಮಂಜೇಶ್ವರದ ಗೋವಿಂದ ಪೈಗಳ ಮೂಲಕ ಅವರಿಗೆ ಊರು ಗೋಲು ನೀಡಲಾಗಿತ್ತು ಎನ್ನುವ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ.
  • ಪೈ ಅವರು ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು ಒಟ್ಟು 25 ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಕೊಂಡಿದ್ದರು. ಗೋವಿಂದ ಪೈಯವರು ನಂತರ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರು ಗಳಿಸಿದರು.
  • ಗೋವಿಂದ ಪೈಗಳು ‘ಗಿಳಿವಿಂಡು’, ‘ನಂದಾದೀಪ’ ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ ‘ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ. ‘ತಾಯಿ‘, ‘ಕಾಯಾಯ್ ಕೊಮಾಜಿ’ ಎಂಬ ಸಾಮಾಜಿಕ ನಾಟಕಗಳನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪುರಸ್ಕಾರಗಳು:

  • 1949ರಲ್ಲಿ ಮದರಾಸು ಸರಕಾರವು (1949ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ ಅಂದರೆ ಈಗಿನ ತಮಿಳುನಾಡಿನಲ್ಲಿದ್ದಿತು.) ಗೋವಿಂದ ಪೈಗಳಿಗೆ ರಾಷ್ಟ್ರ ಕವಿ ಎಂದು ಸನ್ಮಾನ ನೀಡಿ ಗೌರವಿಸಿತು.
  • ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- ೧೯೫೦ರಲ್ಲಿ ಮುಂಬಯಿಯಲ್ಲಿ ಜರುಗಿದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು.
  • ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಎಂ.ಜಿ.ಎಂ ಕಾಲೇಜಿನ ಅಂಗಸಂಸ್ಥೆಯಾಗಿ 1965ರಲ್ಲಿ ಸ್ಥಾಪನೆಗೊಂಡಿತು.

ಮರಣ:

  • 1963ರಸೆಪ್ಟೆಂಬರ್ 06 ರಂದು ಗೋವಿಂದ ಪೈಯವರು ನಿಧನ ಹೊಂದಿದರು.

ಇಂಧನ ಉಳಿತಾಯಕ್ಕೆ “ಮಿಷನ್ 41ಕೆ” ಜಾರಿಗೊಳಿಸಿದ ರೈಲ್ವೆ ಇಲಾಖೆ

ಮುಂದಿನ ಹತ್ತು ವರ್ಷಗಳಲ್ಲಿ ಇಂಧನ ಬಳಕೆ ಮೇಲೆ ರೂ 41,000 ಕೋಟಿ ಉಳಿತಾಯ ಮಾಡುವ ಸಲುವಾಗಿ ರೈಲ್ವೆ ಸಚಿವಾಲಯ “ಮಿಷನ್ 41ಕೆ” ಆನಾವರಣಗೊಳಿಸಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ನೇತೃತ್ವದಲ್ಲಿ ನಡೆದ ಭಾರತೀಯ ರೈಲ್ವೆ ಇಂಧನ ಉಪಕ್ರಮಗಳ ಮೇಲಿನ ದುಂಡು ಮೇಜಿನ ಚರ್ಚೆ ಸಮಯದಲ್ಲಿ ಈ ಕಾರ್ಯಕ್ರಮವನ್ನು ಘೋಷಿಸಲಾಯಿತು.

ಪ್ರಮುಖಾಂಶಗಳು:

  • ಪ್ರಸ್ತುತ ಶೇ 50% ರೈಲು ಸಂಚಾರ ಡೀಸೆಲ್ ಅವಲಂಭಿತವಾಗಿದ್ದು, ಮುಂದಿನ ದಿನಗಳಲ್ಲಿ ಶೇ 90% ರೈಲು ಸಂಚಾರವನ್ನು ವಿದ್ಯುತ್ತೀಕರಣಗೊಳಿಸುವ ಮೂಲಕ “ಮಿಷನ್ 41ಕೆ”ಯ ಉದ್ದೇಶವನ್ನು ತಲುಪುವ ಗುರಿಹೊಂದಲಾಗಿದೆ.
  • ರೈಲು ಇಲಾಖೆ ಹೆಚ್ಚು ಹೆಚ್ಚು ವಿದ್ಯುತ್ ಅನ್ನು DISCOM ಮೂಲಕ ಪರಿಚಯಿಸುವ ಬದಲು ಕಡಿಮೆ ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ನಿರ್ಧರಿಸಿದೆ. ಈ ಕ್ರಮದಿಂದ ಇಂಧನ ಮೇಲಿನ ಖರ್ಚಿನಲ್ಲಿ ಶೇ 25% ಉಳಿತಾಯ ಮಾಡಬಹುದಾದ ಆಲೋಚನೆಯನ್ನು ಹೊಂದಲಾಗಿದೆ.
  • ಅಲ್ಲದೇ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರದ ಮೂಲಕ ರೈಲ್ವೆ ಇಲಾಖೆಯಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆಗೊಳಿಸಲು ಚಿಂತಿಸಲಾಗಿದೆ.
  • ರೈಲ್ವೆ ಸಂಚಾರವನ್ನು ಸಂಪೂರ್ಣವಾಗಿ ವಿದ್ಯುದೀಕರಣಗೊಳಿಸುವ ಮೂಲಕ ಭಾರತೀಯ ರೈಲ್ವೆ ಇಂಧನ ಆಮದಿನ ಮೇಲಿನ ಆವಲಂಭನೆಯನ್ನು ತಗ್ಗಿಸಬಹುದಾಗಿದೆ ಅಲ್ಲದೇ ಇಂಧನ ಮೇಲಿನ ವೆಚ್ಚವನ್ನು ಕಡಿತಗೊಳಿಸಬಹುದು.

2016-17ನೇ ಸಾಲಿನ ರೈಲು ಬಜೆಟ್ ನಲ್ಲಿ1000 ಮೆಗಾ ವ್ಯಾಟ್ ಸೌರ ವಿದ್ಯುತ್ ಹಾಗೂ 200 ಮೆಗಾ ವ್ಯಾಟ್ ಪವನ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.

ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ ಸಹ ಸದಸ್ಯ ರಾಷ್ಟ್ರವಾದ ಭಾರತ

ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ (CERN) ಸದಸ್ಯ ರಾಷ್ಟ್ರವಾಗಲು ನವೆಂಬರ್ 2016 ರಂದು ಸಹಿ ಹಾಕಿದ್ದ ಒಪ್ಪಂದಕ್ಕೆ ಅಗತ್ಯವಿದ್ದ ಆಂತರಿಕ ಪ್ರಕ್ರಿಯೆ ಸರ್ಕಾರ ಪೂರ್ಣಗೊಳಿಸಿದ್ದು, ಸರ್ನ್ ನ ಸಹ ಸದಸ್ಯ ರಾಷ್ಟ್ರವಾಗಿ ಭಾರತ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಸೆಪ್ಟೆಂಬರ್ 2016ರಲ್ಲಿ ಸರ್ನ್ (CERN) ಆಡಳಿತ ಮಂಡಳಿ ಭಾರತಕ್ಕೆ 2004 ರಿಂದ ಇದ್ದ ವೀಕ್ಷಣಾ ಸ್ಥಾನಮಾನಕ್ಕೆ ಬದಲಾಗಿ ಸದಸ್ಯ ರಾಷ್ಟ್ರ ಸ್ಥಾನಮಾನ ನೀಡಲು ನಿರ್ಣಯವನ್ನು ಕೈಗೊಂಡಿತ್ತು.

ಭಾರತಕ್ಕೆ ಅನುಕೂಲಗಳೇನು?

  • ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ (CERN)ನ ಮಂಡಳಿ ಹಾಗೂ ಸಮಿತಿಗಳ (ವೈಜ್ಞಾನಿಕ ನೀತಿ ಸಮಿತಿ ಮತ್ತು ಹಣಕಾಸು ಸಮಿತಿ) ಸಭೆಯಲ್ಲಿ ಭಾರತ ಈಗ ಭಾಗವಹಿಸಬಹುದು. ಆದರೆ ಮಂಡಳಿಯಲ್ಲಿ ಕೈಗೊಳ್ಳಲಾಗುವ ನಿರ್ಣಯಗಳಿಗೆ ಮತ ಚಲಾಯಿಸುವ ಅಧಿಕಾರವನ್ನು ಭಾರತ ಹೊಂದಿಲ್ಲ.
  • ಭಾರತದ ಯುವ ಸಂಶೋಧಕರು ಹಾಗೂ ವಿಜ್ಞಾನಿಗಳು ಸರ್ನ್ ನ ವಿವಿಧ ಯೋಜನೆಗಳಲ್ಲಿ ಭಾಗವಹಿಸಬಹುದಾಗಿದೆ. ಆ ಮೂಲಕ ದೇಶಿಯ ಯೋಜನೆಗಳಿಗೆ ಅಗತ್ಯವಿರುವ ಜ್ಞಾನ ನಿಯೋಜನೆಗೆ ಅವಕಾಶ ಸೃಜನೆಯಾಗಲಿದೆ.
  • ಭೌತಶಾಸ್ತ್ರ ಮತ್ತು ಎಂಜನಿಯರಿಂಗ್ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಸಂಶೋಧನೆ ಕೈಗೊಳ್ಳಲು ಹೊಸ ನಾಂದಿಯಾಗಲಿದೆ.
  • ಇದರ ಜೊತೆಗೆ ಸರ್ನ್ ನ ವಿವಿಧ ಯೋಜನೆಗಳ ಗುತ್ತಿಗೆಗಾಗಿ ಭಾರತೀಯ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಬಹುದಾಗಿದೆ. ಇದರಿಂದ ಸುಧಾರಿತ ತಂತ್ರಜ್ಞಾನ ಕ್ಷೇತ್ರದಲ್ಲಿ ಕೈಗಾರಿಕ ಸಹಯೋಗಕ್ಕಾಗಿ ಅವಕಾಶಗಳು ತೆರೆದುಕೊಳ್ಳಲಿವೆ.

ಸರ್ನ್ ಬಗ್ಗೆ:

  • ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ ವಿಶ್ವದ ಅತಿದೊಡ್ಡ ಪರಮಾಣು ಹಾಗೂ ಭೌತಕಣ ಪ್ರಯೋಗಾಲಯವಾಗಿದೆ. ಫ್ರಾನ್ಸ್ ಮತ್ತು ಸ್ವಿಸ್ ಗಡಿ ಭಾಗದ ವಾಯುವ್ಯ ಜಿನೀವಾ ನಗರದಲ್ಲಿ ನೆಲೆಗೊಂಡಿದೆ. ಸರ್ನ್ ಅನ್ನು 1954ರಲ್ಲಿ ಸ್ಥಾಪಿಸಲಾಯಿತು.

ಸದಸ್ಯ ರಾಷ್ಟ್ರಗಳು:

  • ಸರ್ನ್ ಒಟ್ಟು 22 ಸದಸ್ಯ ರಾಷ್ಟ್ರಗಳು, ನಾಲ್ಕು ಸಹ ಸದಸ್ಯ ರಾಷ್ಟ್ರಗಳು ಹಾಗೂ ಮೂರು ಅಂತಾರಾಷ್ಟ್ರೀಯ ಸಂಸ್ಥೆಗಳು ವೀಕ್ಷಣಾ ಸ್ಥಾನಗಳನ್ನು ಹೊಂದಿವೆ.
  • ಭಾರತ, ಪಾಕಿಸ್ತಾನ, ಟರ್ಕಿ ಮತ್ತು ಉಕ್ರೇನ್ ಸರ್ನ್ ನ ಸಹ ಸದಸ್ಯ ರಾಷ್ಟ್ರಗಳು.

ಸರ್ನ್ ನ ಕಾರ್ಯಗಳೇನು?

  • ವಿಜ್ಞಾನಿಗಳು ಮತ್ತು ಎಂಜನಿಯರ್ ಗಳಿಗೆ ಅತ್ಯಾಧುನಿಕ ವೈಜ್ಞಾನಿಕ ಉಪಕರಣ ಮತ್ತು ಸುಧಾರಿತ ಕಂಪ್ಯೂಟಿಂಗ್ ವ್ಯವಸ್ಥೆಗಳ ಮೂಲಕ ವಿಶ್ವದ ಮೂಲಭೂತ ರಚನೆಯ ಬಗ್ಗೆ ಅಧ್ಯಯನ ನಡೆಸಲು ಸಹಾಯ ಮಾಡುತ್ತಿದೆ. ಅಲ್ಲದೇ ಕಣ ವೇಗವರ್ಧಕಗಳು ಸೇರಿದಂತೆ ಉನ್ನತ ಶಕ್ತಿ ಭೌತವಿಜ್ಞಾನ ಸಂಶೋಧನೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ.

ಸರ್ನ್ ಸಾಧನೆ:

  • ದೇವ ಕಣ ಸಂಶೋಧನೆಗೆ ಸಂಬಂಧಿಸಿದ ಹಿಗ್ಗ್ಸ್ ಬೊಸನ್ ಸಂಶೋಧನೆ ನಡೆಸಲು “ಲಾರ್ಜ್ ಹಾಡ್ರನ್ ಕೊಲೈಡರ್ (Large Hadron Collider)” ಸ್ಥಾಪಿಸಿ ಸಂಶೋಧನೆ ನಡೆಸುತ್ತಿರುವುದು ಸರ್ನ್ ಮಹತ್ವದ ಸಂಶೋಧನೆಗಳಲ್ಲಿ ಒಂದಾಗಿದೆ.

ಭಾರತ-ಸರ್ನ್:

  • ಭಾರತ ಮತ್ತು ಸರ್ನ್ ನ ಸ್ನೇಹ ಸುಮಾರು 50 ವರ್ಷಗಳಷ್ಟು ಹಳೆಯದು. ಸರ್ನ್ ನ ವಿವಿಧ ಯೋಜನೆಗಳಲ್ಲಿ ಭಾರತದ ವಿಜ್ಞಾನಿಗಳು, ಎಂಜನಿಯರ್ ಗಳು ಮತ್ತು ತಂತ್ರಜ್ಞನರು ಸಕ್ರಿಯವಾಗಿ ಪಾಲ್ಗೊಂಡಿದ್ದು, ಯೋಜನೆಗಳ ಯಶಸ್ವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
  • 1991 ರಲ್ಲಿ ಭಾರತ-ಸರ್ನ್ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ವೈಜ್ಞಾನಿಕ ಸಹಕಾರಕ್ಕೆ ಮುನ್ನಡೆ ಬರೆದವು. ಅಂದಿನಿಂದ ಭಾರತ ಮತ್ತು ಸರ್ನ್ ಅನೇಕ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿವೆ.
  • ಲಾರ್ಜ್ ಹಾಡ್ರನ್ ಕೊಲೈಡರ್ (Large Hadron Collider)” ಸ್ಥಾಪನೆ ಹಾಗೂ ಅದಕ್ಕೆ ಬೇಕಾದ ಬಿಡಿ ಉಪಕರಣಗಳ ಪೂರೈಕೆಗೆ ಭಾರತದ ವಿಜ್ಞಾನಿಗಳ ಆಗಾಧವಾದ ಕೊಡುಗೆಯನ್ನು ನೀಡಿದ್ದಾರೆ.

“ಒಟ್ಟಾರೆ ಅಭಿವೃದ್ದಿ ಸೂಚ್ಯಂಕ (Inclusive Development Index)”ದಲ್ಲಿ ಭಾರತಕ್ಕೆ 60ನೇ ಸ್ಥಾನ

 ವಿಶ್ವ ಆರ್ಥಿಕ ವೇದಿಕೆ ಬಿಡುಗಡೆಗೊಳಿಸಿರುವ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ದಿ ವರದಿಯಲ್ಲಿ 2017 ಒಟ್ಟಾರೆ ಅಭಿವೃದ್ದಿ ಸೂಚ್ಯಂಕದಲ್ಲಿ 79 ರಾಷ್ಟ್ರಗಳ ಪೈಕಿ ಭಾರತ 60ನೇ ಸ್ಥಾನವನ್ನು ಪಡೆದುಕೊಂಡಿದೆ. ಸೂಚ್ಯಂಕವನ್ನು ಒಟ್ಟು 12 ಸಾಧಕ ಮಾನದಂಡಗಳನ್ನು ಆಧರಿಸಿ ಬಿಡುಗಡೆಗೊಳಿಸಲಾಗಿದ್ದು, 1 ರಿಂದ 7 ಅಂಕಗಳ ಮಾಪವನ್ನು ಆಧರಸಿ ಸೂಚ್ಯಂಕದಲ್ಲಿ ದೇಶಗಳಿಗೆ ಶ್ರೇಯಾಂಕವನ್ನು ನೀಡಲಾಗಿದೆ.

ವರದಿಯ ಪ್ರಮುಖಾಂಶಗಳು:

  • 2017 ಟಾಪ್ ಹತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು: ಲಿಥುಯಾನಿಯ (1), ಅಜರ್ಬೈಜನ್ (2), ಹಂಗೇರಿ (3), ಪೋಲ್ಯಾಂಡ್ (4), ರೊಮಾನಿಯ (5), ಉರುಗ್ವೆ (6), ಲಾಟ್ವಿಯ (7), ಪನಮಾ (8), ಕೊಸ್ಟ ರಿಕ (9) ಮತ್ತು ಚಿಲಿ (10).
  • 2017 ಟಾಪ್ ಹತ್ತು ಸುಧಾರಿತ ಆರ್ಥಿಕತೆ ರಾಷ್ಟ್ರಗಳು: ನಾರ್ವೆ (1), ಲಕ್ಸಂಬರ್ಗ್ (2), ಸ್ವಿಟ್ಜರ್ಲ್ಯಾಂಡ್ (3), ಐಸ್ ಲ್ಯಾಂಡ್ (4), ಡೆನ್ಮಾರ್ಕ್ (5), ಫ್ರಾನ್ಸ್ (6), ನೆದರ್ಲ್ಯಾಂಡ್ (7), ಆಸ್ಟ್ರೇಲಿಯಾ (8), ನ್ಯೂಜಿಲ್ಯಾಂಡ್ (9) ಮತ್ತು ಆಸ್ಟ್ರೀಯಾ (10).
  • ಬ್ರಿಕ್ಸ್ ರಾಷ್ಟ್ರಗಳು: ರಷ್ಯಾ (13), ಚೀನಾ (30) ಮತ್ತು ಬ್ರೆಜಿಲ್ (30).
  • ಭಾರತದ ನೆರೆಹೊರೆ ರಾಷ್ಟ್ರಗಳು: ಭಾರತದ ನೆರೆಹೊರೆ ರಾಷ್ಟ್ರಗಳ ಪೈಕಿ ಚೀನಾ (15), ನೇಪಾಳ (27), ಬಾಂಗ್ಲದೇಶ (36) ಮತ್ತು ಪಾಕಿಸ್ತಾನ (52) ಸ್ಥಾನದಲ್ಲಿವೆ.
  • ಸೂಚ್ಯಂಕದಲ್ಲಿ ಭಾರತ 3.38 ಅಂಕಗಳನ್ನು ಪಡೆದುಕೊಂಡಿದೆ. ಆ ಮೂಲಕ 79 ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಕಳಪೆ ಸಾಧನೆ ಮಾಡಿದೆ. ಆದರೆ ವ್ಯವಹಾರ ಅಭಿವೃದ್ದಿಗೆ ಹಣಕಾಸಿನ ನೆರವು ಮತ್ತು ನೈತಿಕ ಆರ್ಥಿಕ ಬಂಡವಾಳದಲ್ಲಿ ಉತ್ತಮ ಸಾಧನೆ ಮಾಡಿದೆ.

ವಿಶ್ವದ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

ವಿಶ್ವದ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ. ಜಿಎಲ್‍ಎಲ್ ಗ್ಲೋಬಲ್ ರಿಸರ್ಚ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಶಿಕ್ಷಣ, ಮೂಲಸೌಕರ್ಯ, ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೊಂದಿಕೊಳ್ಳುವುದು ಸೇರಿದಂತೆ ದೇಶದ ಪ್ರಗತಿಗೆ ತಮ್ಮ ಕಾಣಿಕೆಯನ್ನೂ ನೀಡುತ್ತಿರುವ ವಿಚಾರಗಳನ್ನಾಧರಿಸಿ ಜಗತ್ತಿನ ಮೂವತ್ತು ನಗರಗಳನ್ನು ಗುರುತಿಸಲಾಗಿದೆ. ಭಾರತದ ನಗರಗಳು ಸೇರಿದಂತೆ ಚೀನಾ, ವಿಯೆಟ್ನಾಂ ಮತ್ತು ಅಮೆರಿಕದ ಹಲವು ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಪ್ರಸ್ತುತ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದಿದ್ದು, ಭಾರತದ ಇತರ ನಗರಗಳಾದ ಹೈದರಾಬಾದ್ ( 5ನೇ ಸ್ಥಾನ), ಪುಣೆ (13), ಚೆನ್ನೈ(18) ದೆಹಲಿ (23) ಮತ್ತು ಮುಂಬೈ 25 ನೇ ಸ್ಥಾನದಲ್ಲಿದೆ.

ಪಟ್ಟಿಯಲ್ಲಿ ಟಾಪ್ 10 ಸ್ಥಾನದಲ್ಲಿರುವ ನಗರಗಳು:

ಬೆಂಗಳೂರು, ಹೋ ಚಿ ಮಿನಾ ಸಿಟಿ, ಸಿಲಿಕಾನ್ ವ್ಯಾಲಿ, ಶಾಂಘೈ, ಹೈದ್ರಾಬಾದ್, ಲಂಡನ್, ಆಸ್ಟಿನ್, ಹನೋಯಿ, ಬೋಸ್ಟನ್,  ನೈರೋಬಿ

One Thought to “ಪ್ರಚಲಿತ ವಿದ್ಯಮಾನಗಳು-ಜನವರಿ-17,18, 2017”

  1. siddu sajjan

    Sir January month current affairs yavag bidtira?

Leave a Comment

This site uses Akismet to reduce spam. Learn how your comment data is processed.