ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ಕೆ.ಎಂ.ಹನುಮಂತರಾಯಪ್ಪ ಅಧಿಕಾರ ಸ್ವೀಕಾರ

ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ಕೆ.ಎಂ.ಹನುಮಂತರಾಯಪ್ಪ ಅಧಿಕಾರ ಸ್ವೀಕರಿಸಿದರು. ಹನುಮಂತರಾಯಪ್ಪ ಅವರು ರೇಷ್ಮೆ ಮಂಡಳಿಯ 25ನೇ ಅಧ್ಯಕ್ಷರಾಗಿದ್ದಾರೆ. ಇವರು ಮೂರು ವರ್ಷಗಳ ಕಾಲ ಅಧ್ಯಕ್ಷ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕೆ.ಎಂ.ಹನುಮಂತರಾಯಪ್ಪ ಬಗ್ಗೆ:

  • ಕೆ.ಎಂ.ಹನುಮಂತರಾಯಪ್ಪ ಅವರು ವೃತ್ತಿಯಲ್ಲಿ ರೇಷ್ಮೆ ಬೆಳೆಗಾರ ಹಾಗೂ ನೇಕಾರ. ರೇಷ್ಮೆ ನಗರ ಎಂದೇ ಖ್ಯಾತಿ ಹೊಂದಿರುವ ಕರ್ನಾಟಕದ ದೊಡ್ಡಬಳ್ಳಾಪುರ ಮೂಲದವರು.
  • ಬಿಜೆಪಿ ಪಕ್ಷದ ಹಿರಿಯ ನಾಯಕರು ಆಗಿರುವ ಇವರು, ಕರ್ನಾಟಕ ನೇಕಾರ ಹೋರಾಟ ಸಮಿಯ ಅಧ್ಯಕ್ಷರು ಸಹ ಆಗಿದ್ದಾರೆ.
  • ಈ ಮುಂಚೆ ಇವರು 2000 ರಿಂದ 2002 ಅವಧಿಯಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿದ್ದರು. 2010 ರಿಂದ 2013 ರವರೆಗೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಕರ್ನಾಟಕ ಸರ್ಕಾರದಿಂದ ಇವರು ಉತ್ತಮ ಕೃಷಿಕಾರ ಪ್ರಶಸ್ತಿಯನ್ನು ಇವರು ಪಡೆದಿದ್ದಾರೆ.

ಕೇಂದ್ರ ರೇಷ್ಮೆ ಮಂಡಳಿ ಬಗ್ಗೆ:

  • ಕೇಂದ್ರ ರೇಷ್ಮೆ ಮಂಡಳಿ ಶಾಸನಬದ್ದ ಸಂಸ್ಥೆಯಾಗಿದ್ದು, ಕೇಂದ್ರ ರೇಷ್ಮೆ ಮಂಡಳಿ ಕಾಯಿದೆ-1948 ರಡಿ ಸ್ಥಾಪಿಸಲಾಗಿದೆ.
  • ಕೇಂದ್ರ ಜವಳಿ ಸಚಿವಾಲಯದಡಿ ಇದು ಕಾರ್ಯನಿರ್ವಹಿಸುತ್ತಿದೆ.
  • ದೇಶದಲ್ಲಿ ರೇಷ್ಮೆ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ರಚಿಸಲಾದ ರಾಷ್ಟ್ರಮಟ್ಟದ ಸಂಸ್ಥೆಯಾಗಿದೆ.

ಇ-ಕಾಮರ್ಸ್ ನಿಯಮ ಪರಾಮರ್ಶಿಸಲು ಅಮಿತಾಭ್ ಕಾಂತ್ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಇ-ಕಾಮರ್ಸ್ (ಆನ್ ಲೈನ್ ವಹಿವಾಟು) ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿರುವುದು ಸೇರಿದಂತೆ ಇತರೆ ಎಲ್ಲ ವಿವಾದಾತ್ಮಕ ವಿಷಯಗಳನ್ನು ಪರಾಮರ್ಶಿಸಲು ಕೇಂದ್ರ ಸರ್ಕಾರವು ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಿದೆ. ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ವಾಣಿಜ್ಯ, ಕೈಗಾರಿಕೆ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಸಚಿವಾಲಯಗಳ ಅಧಿಕಾರಿಗಳು ಸಮಿತಿಯಲ್ಲಿ ಇರಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾಲ್ಕು ರಾಜ್ಯಗಳ ಪ್ರತಿನಿಧಿಗಳೂ ಸಮಿತಿಯ ಸದಸ್ಯರಾಗಿರಲಿದ್ದಾರೆ.

ಸಮಿತಿಯ ರಚನೆಯ ಉದ್ದೇಶ:

  • ಇ-ವಾಣಿಜ್ಯ ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಶೀಲನೆ.ಮತ್ತು ನೀತಿಯನ್ನು ಮತ್ತಷ್ಟು ಉದಾರೀಕರಣಗೊಳಿಸಲು ಶಿಫಾರಸುಗಳನ್ನು ಮಾಡುವುದು.
  • ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಇ-ವಾಣಿಜ್ಯ ಉದ್ಯಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಲಾಭ-ನಷ್ಟಗಳ ಪರಾಮರ್ಶಿಸುವುದು.

ಆನ್ ಲೈನ್ ಮೂಲಕ ಔಷಧಗಳ ಮಾರಾಟ ಸೇರಿದಂತೆ ಹಲವು ರಾಜ್ಯಗಳಲ್ಲಿ ತೆರಿಗೆ ಸಂಬಂಧಿತ ಸಮಸ್ಯೆಗಳನ್ನು ಇ-ಕಾಮರ್ಸ್ ಸಂಸ್ಥೆಗಳು ಎದುರಿಸುತ್ತಿವೆ. ಆಹಾರ ಸಂಸ್ಕರಣೆ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ಡಿಐ) ಮಿತಿಯನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಶೇ 100ಕ್ಕೆ ಹೆಚ್ಚಿಸಿರುವುದರಿಂದ ಈ ಸಮಿತಿ ರಚನೆಗೆ ಮಹತ್ವ ಪ್ರಾಪ್ತವಾಗಿದೆ.

ಕುಡಂಕುಳಂ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕ ರಾಷ್ಟ್ರಕ್ಕೆ ಅರ್ಪಣೆ

ರಷ್ಯಾದ ಸಹಯೋಗದೊಂದಿಗೆ ತಮಿಳುನಾಡಿನ ಕುಡಂಕುಳಂನಲ್ಲಿ ನಿರ್ಮಿಸಲಾದ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಲೋಕಾರ್ಪಣೆಗೊಳಿಸಿದರು. ನವದೆಹಲಿ ಮತ್ತು ಮಾಸ್ಕೋದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಕಾರ್ಯ ನೆರವೇರಿಸಲಾಯಿತು. 1000 ಮೆಗಾ ವ್ಯಾಟ್ ಸಾಮರ್ಥ್ಯ ಮೂಲಕ ದೇಶದ ಅತಿ ದೊಡ್ಡ ಅಣು ವಿದ್ಯುತ್ ಉತ್ಪಾದನ ಘಟಕ ಇದಾಗಿದೆ.

  • ತಮಿಳುನಾಡಿನ ತಿರುನೆಲ್ವೆಲಿ ಜಿಲ್ಲೆಯಲ್ಲಿರುವ ಈ ಘಟಕವನ್ನು 1988ರ ಭಾರತ-ರಷ್ಯಾ ಅಣು ಒಪ್ಪಂದದಡಿಯಲ್ಲಿ ಸ್ಥಾಪಿಸಲಾಗಿದೆ.
  • PWR (Pressurized Water Technology) ತಂತ್ರಜ್ಞಾನ ಬಳಸಿ ಸ್ಥಾಪಿಸಲಾಗಿರುವ ದೇಶದ ಮೊದಲ ಅಣು ವಿದ್ಯುತ್ ಘಟಕ.
  • ನ್ಯಾಷನಲ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಮತ್ತು ರಷ್ಯಾದ ಅಟಂಸ್ಟೋರೆ ಎಕ್ಸಪೋರ್ಟ್ ಜಂಟಿಯಾಗಿ ವಿದ್ಯುತ್ ಘಟಕದ ರಿಯಾಕ್ಟರ್ ಗಳನ್ನು ಅಭಿವೃದ್ದಿಪಡಿಸಿವೆ.
  • ಈ ಅಣು ವಿದ್ಯುತ್ ಸ್ಥಾವರದ 1ನೆ ಘಟಕವು 2014ರಿಂದ ವಿದ್ಯುತ್ ಉತ್ಪಾದಿಸುತ್ತಿದ್ದು, 2013 ರಲ್ಲಿ ದಕ್ಷಿಣ ಗ್ರಿಡ್ ಗೆ ಸಂಪರ್ಕಿಸಲಾಗಿದೆ. ಇದುವರೆಗೆ ಘಟಕ ದಿಂದ 1 ಸಾವಿರ ಕೋಟಿ ಯುನಿಟ್ ವಿದ್ಯುದುತ್ಪಾದನೆಯಾಗಿದೆ.

ಭಾರತ- ರಷ್ಯಾ ಅಣು ಒಪ್ಪಂದ 1988:

  • ಭಾರತ ರಷ್ಯಾ ಅಣು ಒಪ್ಪಂದಕ್ಕೆ ಅಂದಿನ ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಮತ್ತು ಸೊವಿಯತ್ ಒಕ್ಕೂಟದ ಮುಖ್ಯಸ್ಥರಾಗಿದ್ದ ಮೈಕೆಲ್ ಗೊರ್ಬಚೆವ್ 1988 ರಲ್ಲಿ ಸಹಿ ಮಾಡಿದ್ದರು. ಈ ಒಪ್ಪಂಧವನ್ನು 1998 ರಲ್ಲಿ ಪುನರ್ಶ್ಚೇತನಗೊಳಿಸಲಾಗಿತ್ತಾದರೂ, ರಷ್ಯಾದ ಅಂತರಿಕ ಸಮಸ್ಯೆಯಿಂದಾಗಿ ಕಾಮಗಾರಿಗೆ 2002 ರಲ್ಲಿ ಚಾಲನೆ ನೀಡಲಾಯಿತು.
  • ಈ ವಿದ್ಯುತ್ ಸ್ಥಾವರದಿಂದ ಉತ್ಪಾದಿಸಲಾಗುವ ವಿದ್ಯುತ್ ಅನ್ನು ತಮಿಳು ನಾಡು (925 ಮೆ.ವ್ಯಾ), ಕರ್ನಾಟಕ (442 ಮೆ,ವ್ಯಾ), ಕೇರಳ (266 ಮೆ.ವ್ಯಾ) ಮತ್ತು ಪುದುಚೇರಿ (67 ಮೆ.ವ್ಯಾ) ನಡುವೆ ಹಂಚಿಕೆ ಮಾಡಲಾಗುವುದು.

ಪ್ರಸೂತಿ ಕಾಯಿದೆ (ತಿದ್ದುಪಡಿ) ಮಸೂದೆ-2016 ಗೆ ರಾಜ್ಯಸಭೆ ಒಪ್ಪಿಗೆ

ಮಹಿಳಾ ಕಾರ್ಮಿಕರ ಹೆರಿಗೆ ರಜೆಯನ್ನು 12 ವಾರದಿಂದ 26 ವಾರದವರೆಗೆ ವಿಸ್ತರಿಸಲು ಅವಕಾಶ ಮಾಡಿಕೊಡುವ ಪ್ರಸೂತಿ ಕಾಯ್ದೆ ತಿದ್ದುಪಡಿಗೆ (Maternity Benefit Amendment Bill) ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯು ಪ್ರಸೂತಿ ಕಾಯಿದೆ-1961ಕ್ಕೆ ತಿದ್ದುಪಡಿ ತರಲಿದೆ. ಕಾಯಿದೆಯಡಿ ಗರ್ಭ ಧರಿಸಿದ ನಂತರ ಹಾಗೂ ಶಿಶು ಪಾಲನೆಗೆ ಗೈರಾಗುವ ದಿನದಲ್ಲಿ ಪೂರ್ಣ ಸಂಬಳ ಪಡೆಯಲು ಮಹಿಳೆಯರು ಅರ್ಹರಿದ್ದಾರೆ.

ಉದ್ದೇಶಿತ ತಿದ್ದುಪಡಿಗಳು:

  • ಮೊದಲ ಎರಡು ಹೆರಿಗೆಗೆ ರಜೆ ಅವಧಿಯನ್ನು 12 ರಿಂದ 26 ವಾರಗಳಿಗೆ ಹೆಚ್ಚಳ, ನಂತರದ ಹೆರಿಗೆಗೆ 12 ವಾರ ರಜಗೆ ಅವಕಾಶ ನೀಡಲಾಗಿದೆ.
  • ನವಜಾತ ಶಿಶುವನ್ನು ದತ್ತು ಪಡೆಯುವ ಮಹಿಳೆಯರು ಹಾಗೂ ಬಾಡಿಗೆ ತಾಯಂದರು (surrogacy)ಗಳಿಗೂ ಈ ತಿದ್ದುಪಡಿ ಅನ್ವಯವಾಗಲಿದ್ದು, 12 ವಾರಗಳ ರಜೆಗೆ ಅವಕಾಶ ಸಿಗಲಿದೆ.
  • ಹೆರಿಗೆಯಾದ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ.
  • 50 ಕ್ಕೂ ಹೆಚ್ಚು ನೌಕರರನ್ನು ಹೊಂದಿರುವ ಸಂಸ್ಥೆ ಅಥವಾ ಕಚೇರಿಗಳಿಗೆ ಈ ನಿಯಮ ಕಡ್ಡಾಯ.
  • ಕಾಯ್ದೆ ತಿದ್ದುಪಡಿಯಿಂದ 1.8 ಕೋಟಿ ಉದ್ಯೋಗಸ್ಥ ಮಹಿಳೆಯರಿಗೆ ಸಹಾಯವಾಗಲಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 10, 2016”

  1. prakasha as

    Want more information,its very less.

Leave a Comment

This site uses Akismet to reduce spam. Learn how your comment data is processed.