ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಸ್ವದೇಶಿ ನಿರ್ಮಿತ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ. ಒಡಿಶಾದ ಚಂಡೀಪುರದಲ್ಲಿರುವ ಸಂಯುಕ್ತ ಪರೀಕ್ಷಾ ವ್ಯಾಪ್ತಿಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು, ಶತ್ರು ರಾಷ್ಟ್ರಗಳ ಖಂಡಾಂತರ ಕ್ಷಿಪಣಿಗಳನ್ನು ಪತ್ತೆ ಹಚ್ಚಿ ಧ್ವಂಸ ಮಾಡಬಲ್ಲ ಸಾಮರ್ಥ್ಯವನ್ನು ಈ ಸೂಪರ್ ಸಾನಿಕ್ ಕ್ಷಿಪಣಿ ಹೊಂದಿದೆ.

ಪ್ರಮುಖಾಂಶಗಳು:

  • ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಡಿಆರ್ಡಿಓ ಸಂಸ್ಥೆ ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ದಿಪಡಿಸಿದೆ. ಈ ಕ್ಷಿಪಣಿಯು 7.5 ಮೀ ಉದ್ದವಿದೆ.
  • ನ್ಯಾವಿಗೇಷನ್ ವ್ಯವಸ್ಥೆ, ಹೈ-ಟೆಕ್ ಕಂಪ್ಯೂಟರ್ ಸೇರಿದಂತೆ ಅತ್ಯಾಧನಿಕ ತಂತ್ರಜ್ಞಾನವನ್ನು ಈ ಕ್ಷಿಪಣಿಯಲ್ಲಿ ಅಳವಡಿಸಲಾಗಿದೆ.
  • 30 ಕಿ.ಮೀಗಿಂತ ಕಡಿಮೆ ಎತ್ತರದ ವಾತಾವರಣದಲ್ಲಿ ಹಾರಿ ಬರುವ ಶತ್ರು ಕ್ಷಿಪಣಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

ಭಾರತದ ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ (Ballistic Missile Defence System):

  • ಡಿಆರ್ಡಿಓ ದ “ರಿಸರ್ಚ್ ಸೆಂಟರ್ ಇಮರತ್” ಎಲ್ಲಾ ರೀತಿಯ ಅತ್ಯಾಧುನಿಕ ಕ್ಷಿಪಣಿಗಳನ್ನು ಅಭಿವೃದ್ದಿಪಡಿಸುವ ಮೂಲಕ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದೆ.
  • ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಎರಡು ರೀತಿಯ ಕ್ಷಿಪಣಿಗಳನ್ನು ಒಳಗೊಂಡಿದೆ. ಅವುಗಳೆಂದರೆ ಕಡಿಮೆ ಎತ್ತರದ ಅಡ್ವಾನ್ಸ್ಡ್ ಏರಿಯಾ ಡಿಫೆನ್ಸ್ ಕ್ಷಿಪಣಿ ಮತ್ತು ಪೃಥ್ವಿ ರಕ್ಷಣಾ ವಾಹನ ಕ್ಷಿಪಣಿ (ಹೊರ ವಾತಾವರಣಕ್ಕೆ).
  • 2022 ರ ವೇಳೆಗೆ ಈ ರಕ್ಷಣಾ ಕವಚ ಸೇವೆಯನ್ನು ಡಿಆರ್ಡಿಓ ಒದಗಿಸಲಿದೆ. ಅಮೆರಿಕಾ, ರಷ್ಯಾ ಮತ್ತು ಇಸ್ರೇಲ್ ನಂತರ ಖಂಢಾತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಲಿರುವ ವಿಶ್ವದ ನಾಲ್ಕನೇ ರಾಷ್ಟ್ರ ಭಾರತ ಎನಿಸಲಿದೆ.
  • ಫೆಬ್ರವರಿ 2017 ರಲ್ಲಿ ಪೃಥ್ವಿ ಖಂಡಾಂತರ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.

2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟ

2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ನಟರಾದ ಜೆ.ಕೆ.ಶ್ರೀನಿವಾಸಮೂರ್ತಿ, ನಟಿ ಆದವಾನಿ ಲಕ್ಷ್ಮೀದೇವಿ, ಹಾಸ್ಯನಟ ಎಂ.ಎಸ್.ಉಮೇಶ್, ಎಸ್.ದೊಡ್ಡಣ್ಣ ಸೇರಿದಂತೆ 15 ಕಲಾವಿದರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

  • ಚಲನಚಿತ್ರ ಅಕಾಡೆಮಿ ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಇದೇ ಮಾರ್ಚ್ 3 ರಂದು ಸಂಜೆ 6 ಗಂಟೆಗೆ ಪುರಭವನದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.

  • ಆರ್ ನಾಗೇಂದ್ರ ರಾವ್ ಪ್ರಶಸ್ತಿ: ಅಭಿನಯ ನಟ- ಜೆಕೆ ಶ್ರೀನಿವಾಸ ಮೂರ್ತಿ
  • ಎಂ.ವಿ.ರಾಜಮ್ಮ ಪ್ರಶಸ್ತಿ: ಆದವಾನಿ ಲಕ್ಷ್ಮೀದೇವಿ
  • ಬಾಲಕೃಷ್ಣ ಪ್ರಶಸ್ತಿ (ಹಾಸ್ಯ) : ಎಂ.ಎಸ್ ಉಮೇಶ್
  • ತೂಗುದೀಪ ಶ್ರೀನಿವಾಸ್ ಪ್ರಶಸ್ತಿ(ಖಳ): ಎಸ್ ದೊಡ್ಡಣ್ಣ
  • ಬಿಆರ್ ಪಂತುಲು (ನಿರ್ದೇಶನ): ಕೆ.ವಿ ರಾಜು
  • ಶಂಕರ್ ಸಿಂಗ್ ಪ್ರಶಸ್ತಿ (ನಿರ್ಮಾಣ): ಸಿ.ಜಯರಾಂ
  • ಬಿ ಜಯಮ್ಮ(ಪ್ರದರ್ಶನ): ಕುಮಾರ್ ಶೆಟ್ಟರ್
  • ವೀರಾಸ್ವಾಮಿ ಪ್ರಶಸ್ತಿ (ಹಂಚಿಕೆ) : ಪಟಲ್ ಎಸ್ ಚಂದಾನಿ
  • ಜಿವಿ ಅಯ್ಯರ್ ಪ್ರಶಸ್ತಿ (ಸಂಗೀತ, ಗಾಯನ): ಬಿ.ಕೆ.ಸುಮಿತ್ರಾ
  • ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ (ಚಿತ್ರ ಸಾಹಿತ್ಯ): ಡಾ.ಬಿ.ಎಲ್ ವೇಣು
  • ಬಿ.ಎಸ್. ರಂಗ ಪ್ರಶಸ್ತಿ(ಛಾಯಾಗ್ರಾಹಣ): ಎಸ್ ವಿ ಶ್ರೀಕಾಂತ್
  • ಪಂಡರೀಬಾಯಿ ಪ್ರಶಸ್ತಿ (ಪೋಷಕ) ಬಿ.ವಿ. ರಾಧಾ
  • ಎಂ.ಪಿ ಶಂಕರ್ ಪ್ರಶಸ್ತಿ(ತಂತ್ರಜ್ಞಾನ): ದೇವಿ(ನೃತ್ಯ)
  • ಶಂಕರ್ ನಾಗ್ ಪ್ರಶಸ್ತಿ (ಕಾರ್ಮಿಕ): ಎನ್ ಎಲ್ ರಾಮಣ್ಣ
  • ಕೆ.ಎನ್. ಟೈಲರ್ ಪ್ರಶಸ್ತಿ (ಪ್ರಾದೇಶಿಕ ಭಾಷಾ ಚಿತ್ರ): ರಾಮ್ ಶೆಟ್ಟಿ

ಅಳಿವಿನಂಚಿನಲ್ಲಿರುವ ಕುರುಖ್ ಭಾಷೆಗೆ ಪಶ್ಚಿಮ ಬಂಗಾಳದಲ್ಲಿ ಅಧಿಕೃತ ಭಾಷೆ ಸ್ಥಾನಮಾನ

ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಕುರುಖ್ ಭಾಷೆಗೆ ಪಶ್ಚಿಮ ಬಂಗಾಳ ಸರ್ಕಾರ  ಅಧಿಕೃತ ಭಾಷೆ ಸ್ಥಾನಮಾನವನ್ನು ನೀಡಿದೆ. ಕುರುಖ್ ಭಾಷೆ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ್ದು ಮದ್ಯ ಹಾಗೂ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಪ್ರಚಾರದಲ್ಲಿರುವ ಮೂರು ಭಾಷೆಗಳಲ್ಲೊಂದು.

ಪ್ರಮುಖಾಂಶಗಳು:

  • ಪಶ್ಚಿಮ ಬಂಗಾಳದಲ್ಲಿ ಈ ಭಾಷೆಯನ್ನು ಓರಯನ್ ಸಮುದಾಯದವರು ಮಾತನಾಡುತ್ತಾರೆ. ಪಶ್ಚಿಮ ಬಂಗಾಳದ ಡೂವರ್ಸ್ ಪ್ರದೇಶದಲ್ಲಿ ಈ ಸಮುದಾಯದವರು ಹೆಚ್ಚಾಗಿ ಕಂಡುಬರುತ್ತಾರೆ.
  • ಪಶ್ಚಿಮ ಬಂಗಾಳದಲ್ಲಿ ಮಾತನಾಡುವ ಅನೇಕ ಬುಡಕಟ್ಟು ಭಾಷೆಗಳು ಆಸ್ಟ್ರೋ-ಏಷ್ಯಾಟಿಕ್ ಮತ್ತು ಟಿಬೆಟೊ-ಬರ್ಮನ್ ಪರಿವಾರಕ್ಕೆ ಸೇರಿವೆ. ಆದರೆ ಕುರುಖ್ ಭಾಷೆ ಇದಕ್ಕೆ ಹೊರತಾಗಿದ್ದು ದ್ರಾವಿಡ ಭಾಷೆ ಪರಿವಾರಕ್ಕೆ ಸೇರಿದೆ ಮಾಲ್ಟೊದಿಂದ ಬಂದಿದೆ. ಮಾಲ್ಟೊವನ್ನು ಜಾರ್ಖಂಡಿನ ರಾಜಮಹಲ್ ಹಿಲ್ ಪ್ರದೇಶದಲ್ಲಿ ಮಾತನಾಡಲಾಗುತ್ತಿದೆ.

ಕುರುಖ್ ಭಾಷೆ:

ಕುರುಖ್ ಭಾಷೆ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ್ದು ಮದ್ಯ ಹಾಗೂ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಪ್ರಚಾರದಲ್ಲಿರುವ ಮೂರು ಭಾಷೆಗಳಲ್ಲೊಂದು. ಉಳಿದೆರಡು ಮಾಲ್ತೋ ಮತ್ತು ಬ್ರಾಹು ಈ, ಇವೆಲ್ಲವನ್ನೂ ಉತ್ತರ ದ್ರಾವಿಡ ಭಾಷೆಗಳು ಎಂದು ಕರೆವುದಿದೆ. ಕುರುಖ್ ಭಾಷೆ ಛೋಟಾನಾಗಪುರ, ಒರಿಸ್ಸ, ಬಂಗಾಳ ಮತ್ತು ಅಸ್ಸಾಂಪ್ರದೇಶಗಳ ಗುಡ್ಡಗಾಡುಗಳಲ್ಲಿ ವಾಸಮಾಡುವ ಕೆಲವು ಮೂಲನಿವಾಸಿಗಳಲ್ಲಿ ಬಳಕೆಯಲ್ಲಿದೆ. ಇದನ್ನು ಕುಡುಖ್ ಎಂದೂ ಓರಾನ್ ಎಂದೂ ಕರೆಯುತ್ತಾರೆ. ಕುರುಖ್ ಮಾತಾಡುವವರ ಸಂಖ್ಯೆ ಸಮಾರು ಹದನೇಳು ಲಕ್ಷ. ಕುರುಖಿ ಎಂಬ ಶಬ್ದಕ್ಕೆ ಮಾತಾಡುವವರು ಎಂದೂ ಓರಾನ್ ಎಂಬ ಶಬ್ದಕ್ಕೆ ಮನುಷ್ಯರು ಎಂದೂ ಅರ್ಥ ಹೇಳಬಹುದು. ಈ ಜನಾಂಗದವರು ಬ್ರಾಹುಈ ಭಾಷೆ ಮಾತಾಡುವ ಪ್ರದೇಶವಾದ ಬಲೂಚಿಸ್ಥಾನದಿಂದ ದಕ್ಷಿಣಕ್ಕೆ ಬಂದು ಉತ್ತರ ಕರ್ಣಾಟಕ ರಾಜ್ಯಗಳಲ್ಲಿ ನೆಲೆಸಿರಬೇಕೆಂದೂ ಅಲ್ಲಿಂದ ಸರ್ಮದಾ ನದಿಯ ಮಾರ್ಗವಾಗಿ ಶಹಾಬಾದ್ ಜಿಲ್ಲೆಯ ಕಡೆ ಹೋಗಿರಬೇಕೆಂದೂ ಅಲ್ಲಿಂದ ಮುಸಲ್ಮಾನರಿಂದ ಓಡಿಸಲ್ಪಟ್ಟು ಛೊಟಾನಾಗಪುರ, ರಾಜಮಹಲ್ ಬೆಟ್ಟಗಳ ಕಡೆಗೆ ಹೋಗಿರಬೇಕೆಂದೂ ಊಹಿಸಲಿಕ್ಕೆ ಕೆಲವು ಆಧಾರಗಳಿವೆ. ಮುಂಡಾ ಮತ್ತು ಭೋಜಪುರಿ ಹಿಂದಿಯ ಪ್ರಭಾವ ಈ ಭಾಷೆಯ ಮೇಲೆ ಸಾಕಷ್ಟು ಬಿದ್ದಿದೆ. ಅಲ್ಲದೆ ಒರಿಯಾ ಮತ್ತು ಬಂಗಾಳಿಯ ಪ್ರಭಾವವೂ ಸ್ವಲ್ಪಮಟ್ಟಿಗೆ ಕಂಡುಬರುತ್ತದೆ.

One Thought to “ಪ್ರಚಲಿತ ವಿದ್ಯಮಾನಗಳು-ಮಾರ್ಚ್,5,2017”

Leave a Comment

This site uses Akismet to reduce spam. Learn how your comment data is processed.