ಜೂನಿಯರ್ ಈಜು ಚಾಂಪಿಯನ್ ಷಿಪ್ ಕರ್ನಾಟಕಕ್ಕೆ ಸಮಗ್ರ ಚಾಂಪಿಯನ್ ಪಟ್ಟ

ಗ್ಲೆನ್​ವಾರ್ಕ್ 43ನೇ ಜೂನಿಯರ್ ಈಜು ಚಾಂಪಿಯನ್​ಷಿಪ್​ನಲ್ಲಿ ಆತಿಥೇಯ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಸವನಗುಡಿ ಈಜು ಕೇಂದ್ರದಲ್ಲಿ ಮುಕ್ತಾಯಗೊಂಡ ಚಾಂಪಿಯನ್​ಷಿಪ್ ನಲ್ಲಿ ಕರ್ನಾಟಕ ಮೊದಲ ಸ್ಥಾನವನ್ನು ಅಲಂಕರಿಸಿದರೆ, ಮಹಾರಾಷ್ಟ್ರ ಮತ್ತು ತಮಿಳುನಾಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

  • ಪ್ರಥಮ ಸ್ಥಾನ ಕರ್ನಾಟಕ (37ಚಿನ್ನ, 22 ಬೆಳ್ಳಿ ಮತ್ತು 23 ಕಂಚು: ಒಟ್ಟು 82 ಪದಕ)607 ಪಾಯಿಂಟ್​ಗಳಿಂದ ಅಗ್ರ ಸ್ಥಾನ ಸಂಪಾದಿಸಿತು.
  • ಎರಡನೇ ಸ್ಥಾನ ಮಹಾರಾಷ್ಟ್ರ (17ಚಿನ್ನ, 18 ಬೆಳ್ಳಿ, 15 ಕಂಚು: ಒಟ್ಟು 50 ಪದಕ) 406 ಪಾಯಿಂಟ್​ಗಳಿಂದ 2ನೇ ಸ್ಥಾನ ಸಂಪಾದಿಸಿತು.

ಬೆಂಗಳೂರಿನಲ್ಲಿ ಏಳನೇ ಎಲೆಕ್ಟ್ರಾನಿಕ್ಸ್ ಶೃಂಗಸಭೆಗೆ (ಎಸ್ಇಎಸ್ 2016)ಚಾಲನೆ

ಏಳನೇ ಎಲೆಕ್ಟ್ರಾನಿಕ್ಸ್ ಶೃಂಗಸಭೆ (ಎಸ್‌ಇಎಸ್ 2016) ಜುಲೈ 7 ಮತ್ತು 8 ರಂದು ಬೆಂಗಳೂರಿನಲ್ಲಿ ನಡೆಯಲಿದೆ.  ಭಾರತೀಯ ಎಲೆಕ್ಟ್ರಾನಿಕ್ಸ್ ಉದ್ಯಮ ಸಂಘಟನೆ ‘ಎಲ್ಸಿನಾ’ ಈ ಶೃಂಗಸಭೆಯನ್ನು ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದೆ. ಸೈಯೆಂಟ್, ಬಿಇಎಲ್, ಸಿ-ಡಾಟ್, ಎಚ್‌ಎಎಲ್ ಮತ್ತು ಸೆಂಟ್ರಂ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ನಡೆಯುವ ಎರಡು ದಿನಗಳ ಶೃಂಗಸಭೆಯಲ್ಲಿ 47ಕ್ಕೂ ಹೆಚ್ಚು ದೇಶೀಯ ರಕ್ಷಣಾ ಸಾಮಗ್ರಿಗಳ ತಯಾರಿಕಾ ತಂತ್ರಜ್ಞಾನ ಉದ್ಯಮಗಳು ಭಾಗವಹಿಸಲಿವೆ.

  • ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಹಿವಾಟು ಹೆಚ್ಚಳಕ್ಕೆ ಈ ಶೃಂಗಸಭೆ ವೇದಿಕೆ ಒದಗಿಸಲಿದೆ.
  • ಮೊಬೈಲ್ ಆಯಪ್ ಶೃಂಗಸಭೆ ಬೆಂಗಳೂರು: ಆಯಪ್ಸ್ ವರ್ಲ್ಡ್ ನಿಯತಕಾಲಿಕೆ ಆಯೋಜಿಸಿರುವ ಜಾಗತಿಕ ಮೊಬೈಲ್ ಕಿರು ತಂತ್ರಾಂಶ (ಆಯಪ್) ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಎರಡು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ಮೊಬೈಲ್ ಆಯಪ್ ಕ್ಷೇತ್ರದ ತಂತ್ರಜ್ಞರು ಮತ್ತು ಹೂಡಿಕೆದಾರರು ಒಂದೇ ವೇದಿಕೆಯಲ್ಲಿ ಭಾಗವಹಿಸಿಲಿದ್ದಾರೆ.
  • ವಿಜಯವಾಣಿ ಮಿಸ್ಡ್ ಪರ್ಸನ್ ಆಯಪ್ ಗೆ ಪ್ರಶಸ್ತಿ: ಬೆಂಗಳೂರಿನ ಇತ್ತೀಚೆಗೆ ಆಯೋಜಿಸಿದ್ದ ‘ದಿ ಗ್ಲೋಬಲ್ ಮೊಬೈಲ್ ಆಪ್ ಸಮಿಟ್ ಆಂಡ್ ಅವಾರ್ಡ್ಸ್- 2016’ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಪರಿಣಾಮ’ ವಿಭಾಗದಲ್ಲಿ ವಿಜಯಾನಂದ ಇನ್ಪೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ “ಮಿಸ್ಡ್ ಪರ್ಸನ್” ಮೊಬೈಲ್ ಆಪ್ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಯಿತು.

ದೇಶದ ಮೊದಲ ಶೇ 100% ಬಯೋ ಡೀಸೆಲ್ ಚಾಲಿತ ಬಸ್ ಗೆ ಬೆಂಗಳೂರಿನಲ್ಲಿ ಚಾಲನೆ

ದೇಶದ ಮೊದಲ ಶೇ 100% ಬಯೋ ಡೀಸೆಲ್ ಚಾಲಿತ ಬಸ್ ಗಳಿಗೆ ಬೆಂಗಳೂರಿನ ಶಾಂತಿನಗರ ಕೆಎಸ್ಆರ್ ಟಿಸಿ ಕೇಂದ್ರದಲ್ಲಿ ಚಾಲನೆ ನೀಡಲಾಗಿದೆ. ಸದ್ಯ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ನಿಗಮಗಳ 1800 ಬಸ್‍ಗಳಿಗೆ ಶೇ.20ರಷ್ಟು ಬಯೋ ಡೀಸಲ್ ಬಳಸಿ ಚಾಲನೆ ಮಾಡಲಾಗುತ್ತಿದೆ.

  • ಇದೇ ಪ್ರಥಮ ಬಾರಿಗೆ ಶೇ.100ರಷ್ಟು ಬಯೋ ಡೀಸಲ್ ಬಳಸುವ ಬಸ್‍ಗಳನ್ನು ಚೆನ್ನೈ-ಬೆಂಗಳೂರು ನಡುವೆ ಸಂಚಾರ ಆರಂಭಿಸಿವೆ.
  • ಮುಂದಿನ ದಿನಗಳಲ್ಲಿ ಈ ಬಸ್ ಗಳ ಫಲಿತಾಂಶ ಆಧಾರಿಸಿ ಇತರೆ ಮಾರ್ಗಗಳಲ್ಲೂ ಶೇ.100ರಷ್ಟು ಬಯೋ ಡೀಸೆಲ್ ಚಾಲಿತ ಬಸ್‍ಗಳನ್ನು ಆರಂಭಿಸಲಾಗುವುದು.
  • ಶೇ 100% ರಷ್ಟು ಬಯೋ ಡಿಸೇಲ್ ಚಾಲಿತ ಬಸ್ ಗಳನ್ನು ಸ್ಟ್ಯಾನಿಯಾ ಕಂಪೆನಿ ತಯಾರಿಸಿದೆ. ಈ ಬಸ್ ವೋಲ್ವೋಗಿಂತ 4ಲಕ್ಷ ರೂ.ಕಡಿಮೆ ಇದೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾದರೆ ಬಿ20 ಬಸ್‍ಗಳನ್ನು ಬದಲಾಯಿಸಿ ಸ್ಟ್ಯಾನಿಯಾ ಕಂಪೆನಿ ಬಸ್‍ಗಳನ್ನೇ ಓಡಿಸಲಾಗುವುದು
  • ಬಯೋ ಡೀಸೆಲ್ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ. ವಾರ್ಷಿಕ 70 ಕೋಟಿ ರೂ. ಸಾರಿಗೆ ನಿಗಮಕ್ಕೆ ಉಳಿತಾಯವಾಗಲಿದೆ. ಪ್ರತಿ ಲೀಟರ್‍ಗೆ ಡೀಸಲ್‍ಗಿಂತಲೂ ಬಯೋ ಡೀಸಲ್ ಬೆಲೆ 5 ರೂ. ಕಡಿಮೆ ಇದೆ.

2016 – ವಿಂಬಲ್ಡನ್ ಟೆನ್ನಿಸ್ ಚಾಂಪಿಯನ್ ಷಿಪ್ ವಿಜೇತರು

wimbeldone_upಪುರುಷರ ಸಿಂಗಲ್ಸ್: ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಆಯಂಡಿ ಮರ್ರೆ 6-4, 7-6, 7-6ರಲ್ಲಿ ಕೆನಡಾದ ಮಿಲೊಸ್ ರಾಯೊನಿಕ್ ಅವರನ್ನು ಮಣಿಸಿ ಮೂರನೇ ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಮುಡಿಗೇರಿಸಿಕೊಂಡರು. ಮರ್ರೆ ವಿಂಬಲ್ಡನ್ನಲ್ಲಿ ಜಯಿಸಿದ ಎರಡನೇ ಪ್ರಶಸ್ತಿ ಇದಾಗಿದೆ. 2013ರಲ್ಲಿ ಇಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದ್ದರು. 2012ರ ಅಮೆರಿಕ ಓಪನ್ ಟೂರ್ನಿಯಲ್ಲಿಯೂ ಟ್ರೋಫಿ ಎತ್ತಿ ಹಿಡಿದಿದ್ದರು.

ಮಹಿಳೆಯರ ಸಿಂಗಲ್ಸ್: ಅಮೆರಿಕಾದ ಸೆರೆನಾ ವಿಲಿಯ್ಸಂ ರವರು ಮಹಿಳೆಯರ ವಿಭಾಗದಲ್ಲಿ ವಿಜೇತರಾದರು. ಫೈನಲ್ ನಲ್ಲಿ ಜರ್ಮನಿಯ ಅಂಜೆಲಿಕ್ ಕಿರ್ಬರ್ ರವರನ್ನು 7-5, 6-3 ರಲ್ಲಿ ಮಣಿಸುವ ಮೂಲಕ ಪ್ರಶಸ್ತಿ ಗೆದ್ದರು. ಇದು ವಿಲಿಯ್ಸಂ ರವರ 7ನೇ ವಿಂಬಲ್ಡನ್ ಪ್ರಶಸ್ತಿ ಹಾಗೂ ಒಟ್ಟಾರೆ 22ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ.

ಮಹಿಳೆಯರ ಡಬ್ಬಲ್ಸ್: ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯ್ಸಂ ಸಹೋದರಿಯರು ಫೈನಲ್ ಪಂದ್ಯದಲ್ಲಿ 6-3, 6-4ರ ರಲ್ಲಿ ಹಂಗರಿಯದ ಟಾಮಿಯೆ ಬಾಬೊಸ್ ಹಾಗೂ ಕಜಕಸ್ತಾನದ ಯರಸ್ಲೋವಾ ಶ್ವೆಡೋವಾ ಅವರನ್ನು ಮಣಿಸಿದರು. ವಿಲಿಯಮ್ಸ್ ಸಹೋದರಿಯರು ಒಟ್ಟಾಗಿ ಡಬಲ್ಸ್ನಲ್ಲಿ ಜಯಿಸಿದ 14ನೇ ಪ್ರಶಸ್ತಿ ಇದಾಗಿದೆ. ವಿಂಬಲ್ಡನ್ ನೆಲದಲ್ಲಿ ಈ ಜೋಡಿ 2000, 2002, 2008, 2009, 2012ರಲ್ಲಿ ಚಾಂಪಿಯನ್ ಆಗಿತ್ತು. ಇವರು 1999ರ ಟೂರ್ನಿಯ ಬಳಿಕ ಫೈನಲ್ ತಲುಪಿದ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿದ್ದರು. 17 ವರ್ಷಗಳ ಹಿಂದೆ ಮಾತ್ರ ಫೈನಲ್ ನಲ್ಲಿ ಸೋತಿದ್ದರು.

ಪುರುಷರ ಡಬ್ಬಲ್ಸ್: ಫ್ರೆಂಚ್ ಜೋಡಿ ಪೈರಿ ಹ್ಯೂಗಸ್ ಹರ್ಬಟ್ ಮತ್ತು ನಿಕೊಲಸ್ ಮಹುತ್ ವಿಂಬಲ್ಡನ್ ಪುರುಷರ ಡಬ್ಬಲ್ಸ್ ನಲ್ಲಿ ವಿಜೇತರಾದರು. ಈ ಜೋಡಿ ಜೂಲಿಯನ್ ಬೆನ್ನೆಟ್ಯೂ ಮತ್ತು ಎಡ್ವಾರ್ಡ್ ರೊಜರ್ ವಸಲಿನ್ ಜೋಡಿಯನ್ನ 6-4, 7-6, 6-3 ಸೆಟ್ ಗಳಲ್ಲಿ ಸೋಲಿಸಿ ಪ್ರಶಸ್ತಿ ಬಾಚಿದರು.

UEFA ಯುರೋಪಿಯನ್ ಪುಟ್ಬಾಲ್ ಕಪ್: ಪೋರ್ಚುಗಲ್ ಮುಡಿಗೆ ಪ್ರಶಸ್ತಿಯ ಗರಿ

UEFA_upಪೋರ್ಚುಗಲ್ ತಂಡ UEFA ಯುರೋಪಿಯನ್ ಪುಟ್ಬಾಲ್ ಚಾಂಪಿಯನ್ ಷಿಪ್ ನಲ್ಲಿ ಫ್ರಾನ್ಸ್ ದೇಶವನ್ನು ಮಣಿಸುವ ಮೂಲಕ ವಿಜಯ ಪತಾಕೆ ಹಾರಿಸಿತು. ಈ ಗೆಲುವಿನ ಮೂಲಕ ಪೋರ್ಚುಗಲ್ ಪ್ರಥಮ ಬಾರಿಗೆ UEFA ಯುರೋಪಿಯನ್ ಪುಟ್ಬಾಲ್ ಕಪ್ ನಲ್ಲಿ ಪ್ರಥಮಬಾರಿಗೆ ಪ್ರಶಸ್ತಿ ಪಡೆದುಕೊಂಡಿತು. ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 1-0 ಗೋಲುಗಳಲ್ಲಿ ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿತು. ಪೋರ್ಚಗಲ್ ತಂಡದ ಎಡರ್ ರವರು ಮಾತ್ರ ಒಂದು ಗೋಲನ್ನು ಗಳಿಸಿ ಜಯತಂದಿತ್ತರು. 2016ನೇ UEFA ಯುರೋಪಿಯನ್ ಪುಟ್ಬಾಲ್ ಕಪ್ ಚಾಂಪಿಯನ್ ಷಿಪ್ 15ನೇ ಆವೃತ್ತಿಯದಾಗಿದ್ದು, ಇದೇ ಮೊದಲ ಬಾರಿಗೆ 24 ತಂಡಗಳು ಭಾಗವಹಿಸಿದ್ದವು.

ಪ್ರಶಸ್ತಿಗಳು:

ಚಿನ್ನದ ಬೂಟು: ಅಂಟೊನೆ ಗ್ರೈಜ್ಮನ್ (ಫ್ರಾನ್ಸ್)

ಬೆಳ್ಳಿ ಬೂಟು: ಕ್ರಿಸ್ಚಿಯನೋ ರೊನಾಲ್ಡೊ (ಪೋರ್ಚುಗಲ್)

ಕಂಚಿನ ಬೂಟು: ಒಲಿವರ್ ಗಿರೊಡ್ (ಫ್ರಾನ್ಸ್)

ಟೂರ್ನಮೆಂಟ್ ನ ಕಿರಿಯ ಆಟಗಾರ: ರೆನಟೊ ಸಂಚೆಸ್ (ಪೋರ್ಚುಗಲ್)

ಮಾಜಿ ಪುಟ್ಬಾಲ್ ಆಟಗಾರ ಅಮಲ್ ದತ್ತ ವಿಧಿವಶ

amal dutt_upಮಾಜಿ ಪುಟ್ಬಾಲ್ ಆಟಗಾರ ಹಾಗೂ ದೇಶದ ಮೊಟ್ಟ ಮೊದಲ ಪೂರ್ಣಾವಧಿ ತರಬೇತುದಾರ ಅಮಲ್ ದತ್ತಾ ನಿಧನರಾದರು. 86 ವರ್ಷದ ಅಮಲ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

  • ಅಮಲ್ ಅವರು 1954 ರಲ್ಲಿ ಮನಿಲಿಯಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಭಾರತ ತಂಡದಲ್ಲಿ ಮಿಡ್ ಫೀಲ್ಡರ್ ಆಗಿ ಜನಮನ್ನಣೆಗಳಿಸಿದ್ದರು.
  • ತರಭೇತಿ ಕ್ಷೇತ್ರದ ಹೆಚ್ಚು ಒಲವು ತೋರಿದ ಅವರು ಇಂಗ್ಲೆಂಡ್ ಗೆ ತೆರಳಿ ತರಬೇತುದಾರರಿಗೆ ನೀಡಲಾಗುವ ತರಬೇತಿಯನ್ನು ಪಡೆದುಕೊಂಡಿದ್ದರು.
  • ದತ್ತ ರವರು ಮೊದಲ ಬಾರಿಗೆ 1960ರಲ್ಲಿ ರೈಲ್ವೇಸ್ ಕೋಚ್ ಆಗಿ ಸೇರ್ಪಡೆಗೊಂಡು ನಂತರದ ದಿನಗಳಲ್ಲಿ ದತ್ತಾ ಬೇರೆ ತಂಡಗಳಿಗೆ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ಜುಲೈ 11: ವಿಶ್ವ ಜನಸಂಖ್ಯಾ ದಿನ

Population_upವಿಶ್ವ ಜನಸಂಖ್ಯಾ ದಿನವನ್ನು ಪ್ರತಿವರ್ಷ ಜುಲೈ 11 ರಂದು ಆಚರಿಸಲಾಗುತ್ತಿದೆ. ಮಿತಿಮೀರಿದ ಜನಸಂಖ್ಯೆ ಮತ್ತು ಅದರಿಂದ ಆಗುವ ಆಗುಹೋಗುಗಳ ಬಗ್ಗೆ ಚಿಂತನೆ ನಡೆಸುವ ಸಲುವಾಗಿ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ.

  • 1989ರ ಜುಲೈ 11ರಂದು ಮೊದಲ ಬಾರಿ ವಿಶ್ವ ಸಂಸ್ಥೆಯು ಜನಸಂಖ್ಯಾ ದಿನವನ್ನು ಆಚರಿಸಿತು. ಈ ದಿನದಂದು ವಿಶ್ವದ ಜನಸಂಖ್ಯೆ ಐದು ಬಿಲಿಯನ್ ದಾಟಿದ್ದು, ಅಂದಿನಿಂದ ಪ್ರತಿ ವರ್ಷ ಜುಲೈ 11 ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತಿದೆ.
  • ಇನ್ವೆಸ್ಟಿಂಗ್ ಇನ್ ಟಿನೇಜ್ ಗರ್ಲ್ಸ್ (Investing in Teenage Girls) ಇದು ಈ ವರ್ಷದ ಧ್ಯೇಯವಾಕ್ಯ
  • ಸದ್ಯ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶ ಚೀನಾ. ಆದರೆ ಒಂದು ದಶಕದೊಳಗೆ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
  • ವಿಶ್ವದ ಜನಸಂಖ್ಯೆ  (1ನೇ ಜನವರಿ 2014)  7,137,661,030 ಎಂದು ಅಂದಾಜಿಸಲಾಗಿದೆ.

NBAGR ಯಿಂದ ಓಡಿಶಾ ಕುರಿಗೆ ಅಪರೂಪದ ತಳಿ ಸ್ಥಾನಮಾನ

NBAGR_upರಾಷ್ಟ್ರೀಯ ಜಾನುವಾರು ವಂಶವಾಹಿ ಸಂಪನ್ಮೂಲಗಳ ಸಂಸ್ಥೆಯು (ದಿ ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನಿಟಿಕ್ ರಿಸೋರ್ಸ್) ಓಡಿಶಾದ ಜಗತ್ಸಿಂಗ್ಪುರ ಹಾಗೂ ಕೇಂದ್ರಪಾಡ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಕುರಿ ತಳಿ “ಕೇಂದ್ರಪಾಡ ಕುರಿಯನ್ನು” ಅಪರೂಪದ ಪ್ರಬೇಧ ಎಂದು ಗುರುತಿಸಿದೆ. ಇದಕ್ಕೆ INDIA_SHEEP_1500_KENDRAPADA_14042 ಎಂದು ರಿಜಿಸ್ಟ್ರಾರ್ ಮಾಡಲಾಗಿದ್ದು, ಇಂತಹ ಸ್ಥಾನಮಾನ ಪಡೆದ 42ನೇ ಕುರಿ ತಳಿ ಇದಾಗಿದೆ. ವಿಶೇಷ ಸ್ಥಾನ ಪಡೆದಿರುವುದರಿಂದ ಅಳಿವಿನಂಚಿನಲ್ಲಿ ಈ ಕುರಿಗಳ ಸಂರಕ್ಷಣೆ ಮತ್ತು ಅಭಿವೃದ್ದಿಗೆ ವಿಶೇಷ ಸಹಾಯ ದೊರೆಯಲಿದೆ.

  • ಕೇಂದ್ರಪಾಡ ಕುರಿ ತಳಿಯು ಓಡಿಶಾದ ಜಗತ್ಸಿಂಗ್ಪುರ ಹಾಗೂ ಕೇಂದ್ರಪಾಡ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಕುರಿ ತಳಿ. ಇದನ್ನು ಸ್ಥಳೀಯವಾಗಿ ಕುಜಿ ಮೆಂಧಾ ಎಂದು ಕರೆಯಲಾಗುತ್ತದೆ.
  • ಸರಾಸರಿ 18-20 ಕೆ,ಜಿ ತೂಗುವ ಈ ಕುರಿಗಳು ಕುಳ್ಳಗಿದ್ದು, ಒರಟಾದ ಕೂದಲು ಹೊಂದಿವೆ ಹಾಗೂ ಅತಿ ಉಷ್ಣತೆ ಅಥವಾ ಮಳೆ ಪ್ರದೇಶಗಳಿಗೂ  ಹೊಂದಿಕೊಳ್ಳುವ ಗುಣ ಹೊಂದಿವೆ.
  • ಈ ಕುರಿತಳಿ FecB Mutation gene ಹೊಂದಿರುವ ಕಾರಣ ಹಲವು ಮರಿಗಳಿಗೆ ಏಕಕಾಲದಲ್ಲಿ ಜನ್ಮ ನೀಡುತ್ತವೆ. ಹಾಗಾಗಿ ಬೇರೆ ಕುರಿತಳಿಗೆ ಹೋಲಿಸಿದರೆ ಇವುಗಳು ವಿಶೇಷವಾಗಿವೆ. ಇಂತಹ ಅಪರೂಪದ ಅನುವಂಶೀಯ ಗುಣ ಹೊಂದಿರುವ ಭಾರತದ ಎರಡನೇ ಪ್ರಭೇದ ಹಾಗೂ ವಿಶ್ವದ ಆರನೇ ತಳಿ.