ಎಲೆಕ್ಟ್ರಾನಿಕ್ ಮತಯಂತ್ರದ ಜೊತೆಗೆ VVPAT ಬಳಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಎಲೆಕ್ಟ್ರಾನಿಕ್‌ ಮತ ಯಂತ್ರ(ಇವಿಎಂ)ಗಳ ಜತೆಗೆ ಮತ ಪರಿಶೀಲನಾ ವ್ಯವಸ್ಥೆಯನ್ನು (VVPAT (Voter Verifiable Paper Audit Trial)) ಅಳವಡಿಸುವ ಚುನಾವಣಾ ಆಯೋಗದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. 2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಈ ಮತಯಂತ್ರಗಳನ್ನು ಬಳಸಲಾಗುವುದು. ಸುಮಾರು 16,15,000 ಮತಯಂತ್ರಗಳನ್ನು ಖರೀದಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದು, ಇದಕ್ಕಾಗಿ ರೂ 3,173.45 ಕೋಟಿ ತಗುಲಲಿದೆ. ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಹಾಗೂ ಹೈದ್ರಾಬಾದಿನ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಸಂಸ್ಥೆಗಳನ್ನು ಮತಯಂತ್ರಗಳ ತಯಾರಿಗೆ ಕೇಂದ್ರ ಸರ್ಕಾರ ಆಯ್ಕೆಮಾಡಿದೆ. 16 ಲಕ್ಷ ವಿವಿಪ್ಯಾಟ್‌ ನಿರ್ಮಿಸಲು ಇಸಿಐಎಲ್‌ ಮತ್ತು ಬಿಇಎಲ್‌  ಸಂಸ್ಥೆಗಳಿಗೆ 30 ತಿಂಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಹಿನ್ನಲೆ:

ಎಲ್ಲ ಮತ ಕೇಂದ್ರಗಳಲ್ಲಿ ವಿವಿಪ್ಯಾಟ್‌ ಯಂತ್ರಗಳನ್ನು ಬಳಸಲು ಅಗತ್ಯವಿರುವ ಸಮಯದ ಬಗ್ಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕೇಳಿತ್ತು. 2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಪ್ಯಾಟ್ ಗಳನ್ನು ಬಳಸಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಈ ಮುಂಚೆ 2013ರಲ್ಲಿ ಸುಪ್ರೀಂಕೋರ್ಟ್ ಎಲೆಕ್ಟ್ರಾನಿಕ್ ವಿವಿಪ್ಯಾಟ್ ಮತಯಂತ್ರಗಳನ್ನು 2014ರ ಚುನಾವಣೆಯಲ್ಲಿ ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೆ ಮತದಾನದಲ್ಲಿ ಪಾರದರ್ಶಕತೆ ತರಲು ಕಾಗದ ಮತ ಪತ್ರಗಳ ಬಳಕೆ ತರುವಂತೆ 16 ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.

ಶ್ರೀಮಂತ ಶಂಕರದೇವ ಬತದ್ರವ ರವರ ಜನ್ಮಸ್ಥಳವನ್ನು ಅಭಿವೃದ್ದಿಪಡಿಸಲು ಅಸ್ಸಾಂ ಸರ್ಕಾರ ಚಿಂತನೆ

ಅಸ್ಸಾಂನ 15-16ನೇ ಶತಮಾನದ ಸಮಾಜ ಸುಧಾರಕ ಶ್ರೀಮಂತ ಶಂಕರದೇವ ಬತ್ರದವ ಅವರ ಜನ್ಮಸ್ಥಳವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ವಲಯದಲ್ಲಿ ಗುರುತಿಸುವಂತೆ ಮಾಡಲುಅಸ್ಸಾಂ ಸರ್ಕಾರ ನಿರ್ಧರಿಸಿದೆ.  ಪಂಜಾಬಿನ ಅಮೃತಸರದ ಮಾದರಿಯಲ್ಲೆ ಈ ಸ್ಥಳವನ್ನು ಅಭಿವೃದ್ದಿಪಡಿಸಲಾಗುವುದು ಹಾಗೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣವನ್ನಾಗಿ ಪರಿವರ್ತಿಸಲಾಗುವುದು.

ಶ್ರೀಮಂತ ಶಂಕರದೇವ:

  • ಶ್ರೀಮಂತ ಶಂಕರದೇವ (1449-1568) ರವರು 15-16ನೇ ಶತಮಾನದ ಸಮಾಜ ಹಾಗೂ ಧಾರ್ಮಿಕ ಸುಧಾರಕ, ಕವಿ, ನಾಟಕಕಾರ ಮತ್ತು ವೈಷ್ಣವ ಪಂಥದ ಪ್ರಚಾರಕ. ಶಂಕರದೇವ ಅವರು ಕ್ರಿ.ಶ1449ರಲ್ಲಿ ಅಲಿಪುಖುರಿ-ಬೊರ್ಡೊವದಲ್ಲಿ ಜನಸಿದರು.
  • ಗುರುನಾನಕ್, ರಮಾನಂದ, ಕಬೀರ, ಬಸವಣ್ಣ ಹಾಗೂ ಚೈತನ್ಯ ಮಹಾಪ್ರಭು ರಂತೆ ಶಂಕರದೇವ ಅವರು ಅಸ್ಸಾಂನಲ್ಲಿ ಭಕ್ತಿ ಚಳುವಳಿ ಆರಂಭಗೊಳ್ಳಲು ಪ್ರಮುಖರು. ಭಗವತ ಪುರಾಣ ಇವರ ತತ್ವ.
  • ಇದಲ್ಲದೆ ಬೊರ್ಗಿತ್ ಹೆಸರಿನ ಹೊಸ ಸ್ವರೂಪದ ಸಂಗೀತಾ ಹಾಗೂ ಅಂಕಿತ್ ನಾಥ್, ಭೋನಾ ಹೆಸರಿನ ನಾಟಕ ಪ್ರದರ್ಶನ ಹಾಗೂ ಸತ್ರಿಯಾ ಹೆಸರಿನ ನೃತ್ಯ ರೂಪ ಮತ್ತು ಬಜ್ರವಳಿ ಸಾಹಿತ್ಯ ಭಾಷೆಯನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
  • ಶಂಕರದೇವ ರವರ ಬೋಧನೆ ಇಂದಿಗೂ ಅಸ್ಸಾಂನಲ್ಲಿ ಮನ್ನಣೆ ಹೊಂದಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಭಾವ ಬೀರುತ್ತಿದೆ.

ರಾಷ್ಟ್ರೀಯ ಸುರಕ್ಷತಾ ಮಂಡಳಿ NSCI ಸುರಕ್ಷತಾ ಪ್ರಶಸ್ತಿ 2016

ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವ ಬಂಡಾರು ದತ್ತಾತ್ರೇಯ ಅವರು 2016 ರಾಷ್ಟ್ರೀಯ ಸುರಕ್ಷತಾ ಮಂಡಳಿ NSCI ಸುರಕ್ಷತಾ ಪ್ರಶಸ್ತಿಯನ್ನು 70 ಸಂಸ್ಥೆಗಳಿಗೆ ನವದೆಹಲಿಯಲ್ಲಿ ಪ್ರಧಾನ ಮಾಡಿದರು. ಇದಲ್ಲದೆ ನಿರ್ಮಾಣ ವಲಯದ12 ಸಂಸ್ಥೆಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿಯನ್ನು ಈ ಕೆಳಕಂಡ ನಾಲ್ಕು ವಿಭಾಗದಲ್ಲಿ ನೀಡಲಾಯಿತು.

  • ಸರ್ವಶ್ರೇಷ್ಠ ಸುರಕ್ಷಾ ಪುರಸ್ಕಾರ
  • ಶ್ರೇಷ್ಠ ಸುರಕ್ಷಾ ಪುರಸ್ಕಾರ
  • ಸುರಕ್ಷಾ ಪುರಸ್ಕಾರ
  • ಪ್ರಶಂಸ ಪತ್ರ

ಉತ್ಪಾದನ ವಲಯ: ಇಂಡಿಯನ್ ಆಯಿಲ್ ನ ದಿಗ್ಬಯಿ ತೈಲ ಶುದ್ದೀಕರಣ ಘಟಕ, ನ್ಯಾಷನಲ್ ಫರ್ಟಿಲೈಸರ್, ಪಾಣಿಪತ್, ಕರ್ನಾಟಕದ ಕೈಗಾ ವಿದ್ಯುತ್ ಉತ್ಪಾದನ ಘಟಕಕ್ಕೆ ಪ್ರಶಸ್ತಿ ಲಭಿಸಿದೆ.

ನಿರ್ಮಾಣ ವಲಯ: ಗೋದ್ರೆಜ್ & ಬಾಯ್ಸ್ ಮ್ಯನುಫಾಕ್ಚರಿಂಗ್ ಕೊ ಲಿಮಿಟೆಡ್. ಎಲ್ & ಟಿ ಲಿಮಿಟೆಡ್ ರಾವತ್ಭಾತ & ಚಿತ್ತೊರಘರ್

ಲಘು, ಸಣ್ಣ ಮತ್ತು ಮಧ್ಯಮ ವಾಣಿಜ್ಯೋಧಮ:  ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಥಾಣೆಗೆ ಸರ್ವಶ್ರೇಷ್ಠ ಸುರಕ್ಷಾ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪಡೆದಿರುವ ಮೇಲಿನ ಸಂಸ್ಥೆಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಯಾವುದೇ ಪ್ರಾಣ ಹಾನಿ ಅಪಘಾತ ಪ್ರಕರಣಗಳು ನಡೆದಿಲ್ಲ.

ಆಸ್ಟ್ರೇಲಿಯಾ ಪೌರತ್ವ ಕಾನೂನುಗಳಿಗೆ ಮಹತ್ವದ ಬದಲಾವಣೆ

ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಂ ಟರ್ನ್ಬುಲ್ ಅವರು ಆಸ್ಟ್ರೇಲಿಯಾ ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳಿಗೆ ಮಹತ್ವದ ಬದಲಾವಣೆ ಮಾಡಿರುವುದಾಗಿ ಹೇಳಿದ್ದಾರೆ. ಆಸ್ಟ್ರೇಲಿಯಾದ 457 ವೀಸಾ ನೀತಿಯನ್ನು ರದ್ದುಪಡಿಸಿದ ಬೆನ್ನಲೆ ಈ ಹೊಸ ನಿರ್ಣಯವನ್ನು ಕೈಗೊಂಡಿದ್ದಾರೆ.

ಪ್ರಮುಖಾಂಶಗಳು:

  • ಪೌರತ್ವ ಬಯಸುವವರು ಇಂಗ್ಲಿಷ್‌ ಭಾಷೆಯ ಕೌಶಲಗಳ ಕುರಿತು ಕಠಿಣ ಪರೀಕ್ಷೆ ಎದುರಿಸಬೇಕು.
  • ಪೌರತ್ವಕ್ಕೆ ಅರ್ಜಿ ಸಲ್ಲಿಸುವವರು ಆಸ್ಟ್ರೇಲಿಯಾದಲ್ಲಿ ಕನಿಷ್ಠ ನಾಲ್ಕು ವರ್ಷಗಳ ಕಾಲ ಶಾಶ್ವತ ನಿವಾಸಿಯಾಗಿರಬೇಕು.
  • ಪೌರತ್ವ ಬಯಸುವವರು ಆಸ್ಟ್ರೇಲಿಯದ ಮೌಲ್ಯಗಳನ್ನು ಎತ್ತಿಹಿಡಯಬೇಕು.
  • ಯಾವುದೇ ರೀತಿಯ ಕ್ರಿಮಿನಲ್ ಅಪರಾಧ, ಕೌಟುಂಬಿಕ ಹಿಂಸಾಚಾರ, ಇನ್ನಿತರ ಅಪರಾಧಿಗಳಲ್ಲಿ ಭಾಗಿಯಾಗಿರಬಾರದು.
  • ಒಟ್ಟಾರೆ, ಪೌರತ್ವಕ್ಕೆ ಸಂಬಂಧಿಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮೂರು ಅವಕಾಶಗಳನ್ನು ಮಾತ್ರ ನೀಡಲಾಗುವುದು.
  • ಆಸ್ಟ್ರೇಲಿಯಾದ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

4 Thoughts to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,21,2017”

  1. yogeesh

    Sir please upload may month current affairs last 6 days only april 21st current affairs eday

Leave a Comment

This site uses Akismet to reduce spam. Learn how your comment data is processed.