ಮಾರ್ಚ್ 23: ವಿಶ್ವ ಪವನಶಾಸ್ತ್ರ ದಿನ

ವಿಶ್ವ ಪವನಶಾಸ್ತ್ರ ದಿನವನ್ನು ಮಾರ್ಚ್ 23 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. 1950 ರಲ್ಲಿ ವಿಶ್ವ ಪವನಶಾಸ್ತ್ರ ಸಂಸ್ಥೆಯನ್ನು  ಸ್ಥಾಪಿಸಿದ ಸ್ಮರಣಾರ್ಥ ಈ ದಿನವನ್ನು ವಿಶ್ವ ಪವನಶಾಸ್ತ್ರ ದಿನವೆಂದು ಆಚರಿಸಲಾಗುತ್ತದೆ.

2017 ಧ್ಯೇಯವಾಕ್ಯ:

  • “ಮೋಡಗಳನ್ನು ಅರ್ಥಮಾಡಿಕೊಳ್ಳುವುದು (Understanding Clouds)” ಇದು ಈ ವರ್ಷದ ಧ್ಯೇಯವಾಕ್ಯ. ವಾತಾವರಣ ಹಾಗೂ ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ಮೋಡಗಳು ಹೇಗೆ ಪ್ರಾಮುಖ್ಯವಾಗಿವೆ ಎನ್ನುವುದನ್ನು ಸಾರುವುದು ಇದರ ಉದ್ದೇಶ. ಮೋಡಗಳ ಜಲ ಚಕ್ರದಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಜಲ ಸಂಪನ್ಮೂಲಕ್ಕೆ ಆಗಾಧ ಕೊಡುಗೆಯನ್ನು ನೀಡುತ್ತಿವೆ.
  • ಈ ದಿನದ ಅಂಗವಾಗಿ ವಿಶ್ವ ಪವನಶಾಸ್ತ್ರ ಸಂಸ್ಥೆ “ಅಂತಾರಾಷ್ಟ್ರೀಯ ಮೋಡ ಅಟ್ಲಾಸ್” ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇತ್ತೀಚೆಗೆ ಹೆಸರಿಸಲಾಗಿರುವ ಮೋಡಗಳು ಸೇರಿದಂತೆ ನೂರಾರು ಬಗೆಯ ಮೋಡಗಳ ಚಿತ್ರಗಳನ್ನು ಒಳಗೊಂಡಿದೆ.
  • ಅಲ್ಲದೇ ಇತರೆ ಹವಾಮಾನ ವಿದ್ಯಮಾನಗಳಾದ ಸಿಡಿಲು, ಕಾಮನಬಿಲ್ಲು, ಹಿಮಪಾತಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ವಿಶ್ವ ಪವನಶಾಸ್ತ್ರ ಸಂಸ್ಥೆ:

  • ವಿಶ್ವ ಪವನಶಾಸ್ತ್ರ ಸಂಸ್ಥೆ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಹವಾಮಾನ, ವಾತಾವರಣ ಹಾಗೂ ಜಲ ಸಂಪನ್ಮೂಲಗಳ ಮಾಹಿತಿಯನ್ನು ಕ್ರೋಢಿಕರಿಸುವ ಜವಬ್ದಾರಿಯನ್ನು ಹೊಂದಿದೆ.
  • ವಿಶ್ವ ಪವನಶಾಸ್ತ್ರ ಸಂಸ್ಥೆ 191 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
  • ಇದರ ಕೇಂದ್ರ ಕಚೇರಿ ಸ್ವಿಟ್ಜರ್ಲ್ಯಾಂಡಿನ ಜಿನಿವಾದಲ್ಲಿದೆ.

ಅಣೆಕಟ್ಟುಗಳ ಸುರಕ್ಷತೆಗೆ ಹೊಸ ಕಾಯಿದೆ ತರಲು ಕೇಂದ್ರ ಸರ್ಕಾರ ಚಿಂತನೆ

ದೇಶದಾದ್ಯಂತ ಇರುವ ಸರಿ ಸುಮಾರು 5300ಕ್ಕೂ ಹೆಚ್ಚು ಅಣೆಕಟ್ಟುಗಳ ಸುರಕ್ಷತೆ ಉತ್ತಮಗೊಳಿಸಲು ಸಾಂಸ್ಥಿಕ ಯಾಂತ್ರಿಕ ಅವಲೋಕನ ನಡೆಸುವ ಸಲುವಾಗಿ ಹೊಸ ಕಾಯಿದೆಯ ಕರಡನ್ನು ಸಿದ್ದಪಡಿಸಿದೆ. ಕೇಂದ್ರ ಕಾನೂನು ಸಚಿವಾಲಯ ಈ ಕಾಯಿದೆಯ ಕರಡು ಪ್ರತಿಯನ್ನು ಸಿದ್ದಪಡಿಸಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದ ನಂತರ ಸಂಸತ್ತಿನಲ್ಲಿ ಮಂಡಿಸಲಾಗುವುದು.

ಕಾಯಿದೆಯ ಅಗತ್ಯವೇನು?

  • ದೇಶವ್ಯಾಪ್ತಿ ಸರಿಸುಮಾರು 4900ಕ್ಕೂ ಹೆಚ್ಚು ದೊಡ್ಡ ಅಣೆಕಟ್ಟುಗಳಿವೆ, ಅಲ್ಲದೇ ಸಾವಿರಾರು ಸಣ್ಣ ಜಲಾಶಯಗಳಿವೆ. ಆದಾಗ್ಯೂ ಜಲಾಶಯಗಳು, ನೀರಿನ ಸಂಗ್ರಹ ಮೂಲಗಳನ್ನು ಕಳೆದ ಕೆಲವು ದಶಕಗಳಿಂದ ಸುರಕ್ಷತೆಯ ಮಾದರಿ ಎಂದು ಪರಿಗಣಿಸಲಾಗಿಲ್ಲ.
  • ಸುರಕ್ಷತೆಯ ಕೊರತೆಯಿಂದ ಅಣೆಕಟ್ಟುಗಳ ವೈಫಲ್ಯ ಕಂಡುಬಂದರೆ ಅದರಿಂದಾಗುವ ಅನಾಹುತ ಅಷ್ಟಿಷ್ಟಲ್ಲ. 1979 ರಲ್ಲಿ ಗುಜರಾತಿನ ಮಚ್ಚು ಅಣೆಕಟ್ಟು ಒಡೆದು 25,000ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.
  • ಅಲ್ಲದೇ ಭಾರತದ ಅಣೆಕಟ್ಟುಗಳ ಸ್ತಿತಿಗಳ ಬಗ್ಗೆ ಇತ್ತೀಚೆಗೆ ನಡೆಸಲಾದ ಅಧ್ಯಯನದ ಪ್ರಕಾರ ದೇಶದ ಅರ್ಧದಷ್ಟು ಅಣೆಕಟ್ಟುಗಳು ಸುರಕ್ಷತೆ ಗುಣಮಟ್ಟದ ಕೊರತೆ ಇದೆ. ಆಗಾಗಿ ಕಠಿಣ ಸುರಕ್ಷತೆ ಕ್ರಮದ ಅಗತ್ಯವಿದೆ.

ಕಾರ್ಮಿಕರ ಪರಿಹಾರ (ತಿದ್ದುಪಡಿ) ಮಸೂದೆ-2016ಗೆ ಸಂಸತ್ತಿನಲ್ಲಿ ಅಂಗೀಕಾರ

ಕಾರ್ಮಿಕರ ಪರಿಹಾರಕ್ಕಾಗಿ ಹೆಚ್ಚುತ್ತಿರುವ ಕಾನೂನು ವಿವಾದಗಳನ್ನು ಕಡಿಮೆಗೊಳಿಸುವ ‘ಕಾರ್ಮಿಕರ ಪರಿಹಾರ (ತಿದ್ದುಪಡಿ) ಮಸೂದೆ-2016’ಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿದೆ. ಈ ಮಸೂದೆಯು ಕಾರ್ಮಿಕರ ಪರಿಹಾರ ಕಾಯಿದೆ 1923ಕ್ಕೆ ತಿದ್ದುಪಡಿ ತರಲಿದೆ. ಯಾವುದಾದರೂ ಅಪಘಾತದಿಂದ ಗಾಯಗೊಳ್ಳುವ ಕಾರ್ಮಿಕರಿಗೆ 1 ಲಕ್ಷ ಪರಿಹಾರವನ್ನು ಮಸೂದೆಯಡಿ ಕಲ್ಪಿಸಲಾಗಿದೆ. ಅಲ್ಲದೇ ಕಾಯಿದೆಯ ಉಲ್ಲಂಘನೆ ಮಾಡುವ ಉದ್ಯೋಗದಾತರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಅವಕಾಶವನ್ನು ಸಹ ಮಸೂದೆ ಒಳಗೊಂಡಿದೆ.

ಪ್ರಮುಖಾಂಶಗಳು:

  • ಕಾಯಿದೆಯಡಿ ಉದ್ಯೋಗದಾತರು ತನ್ನ ಕಾರ್ಮಿಕರಿಗೆ ಪರಿಹಾರ ಪಡೆದುಕೊಳ್ಳುವ ಹಕ್ಕನ್ನು ತಿಳಿಸುವುದು ಕಡ್ಡಾಯ. ಈ ಮಾಹಿತಿಯನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವಾಗಲೇ ನೀಡುವುದು ಕಡ್ಡಾಯ.
  • ಮಾಹಿತಿಯನ್ನು ನೀಡಲು ವಿಫಲವಾಗುವ ಉದ್ಯೋಗದಾತರಿಗೆ ರೂ 50,000 ದಿಂದ ರೂ 1 ಲಕ್ಷ ವರೆಗೆ ದಂಡ ವಿಧಿಸಲಾಗುವುದು.
  • ಕಾರ್ಮಿಕರ ಪರಿಹಾರ (ತಿದ್ದುಪಡಿ) ಮಸೂದೆಯಿಂದ ಕಾರ್ಮಿಕರು ಹಾಗೂ ಅವರ ಅವಲಂಬಿತರು ಉದ್ಯೋಗ ಮಾಡುವ ಸಮಯದಲ್ಲಿ ವೃತ್ತಿ ಸಂಬಂಧಿತ ಕಾಯಿಲೆ ಹಾಗೂ ಅವರನ್ನು ಸಾವು ಹಾಗೂ ಸಾವಿನವರೆಗೂ ನಿಷ್ಕ್ರಿಯಗೊಳಿಸುವ ತೊಂದರೆ, ಕೈಗಾರಿಕಾ ಅಪಘಾತಗಳಿಂದ ಗಾಯ ಸೇರಿದಂತೆ ಆಗುವ ತೊಂದರೆಗಳಿಗೆ ಪರಿಹಾರವನ್ನು ಪಡೆಯಬಹುದು.

ಕಾರ್ಮಿಕರ ಪರಿಹಾರ ಕಾಯಿದೆ-1923

  • ಇದರಡಿ ಕಾರ್ಮಿಕರು ಹಾಗೂ ಅವರ ಅವಲಂಬಿತರು ಉದ್ಯೋಗ ಮಾಡುವ ಸಮಯದಲ್ಲಿ ವೃತ್ತಿ ಸಂಬಂಧಿತ ಕಾಯಿಲೆ ಹಾಗೂ ಅವರನ್ನು ಸಾವು ಹಾಗೂ ಸಾವಿನವರೆಗೂ ನಿಷ್ಕ್ರಿಯಗೊಳಿಸುವ ತೊಂದರೆ, ಕೈಗಾರಿಕಾ ಅಪಘಾತಗಳಿಂದ ಗಾಯ ಸೇರಿದಂತೆ ಆಗುವ ತೊಂದರೆಗಳಿಗೆ ಪರಿಹಾರವನ್ನು ಪಡೆಯಬಹುದು.
  • ಕಾಯಿದೆಯ ಸೆಕ್ಷನ್ 30ರ ಅಡಿಯಲ್ಲಿ ಕಾರ್ಮಿಕರು ತಮ್ಮ ಪರಿಹಾರ ವಿವಾದಕ್ಕೆ ಸಂಬಂಧಪಟ್ಟಂತೆ 300ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಪಡೆಯಲು ಹೈಕೋರ್ಟ್’ಗಳವರೆಗೂ ಕಾನೂನು ಹೋರಾಟ ನಡೆಸಬಹುದು.

Leave a Comment

This site uses Akismet to reduce spam. Learn how your comment data is processed.