ಹಿರಿಯ ಖಭೌತ ವಿಜ್ಞಾನಿ ಸಿ. ವಿ. ವಿಶ್ವೇಶ್ವರ ನಿಧನ

ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನಿ, ಕನ್ನಡದ ಸಿ.ವಿ. ವಿಶ್ವೇಶ್ವರ (78) ಮರಣ ಹೊಂದಿದರು. ವಿಶ್ವೇಶ್ವರ ರವರು ಕಪ್ಪು ರಂಧ್ರಗಳ ಕುರಿತ ಸಂಶೋಧನೆ ನಡೆಸುವ ಮೂಲಕ ಗುರುತ್ವದ ಅಲೆಗಳ ಪತ್ತೆಗೆ ಚಾಲನೆ ನೀಡಿದವರಲ್ಲಿ ಒಬ್ಬರಾಗಿದ್ದರು.

ವಿ.ವಿ. ವಿಶ್ವೇಶ್ವರ ಬಗ್ಗೆ:

  • ವಿಶ್ವೇಶ್ವರ ಅವರು, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಅವರು, ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪೂರೈಸಿದ್ದರು.
  • ಪಿಎಚ್.ಡಿ ಸಂಶೋಧನೆ ಸಂದರ್ಭದಲ್ಲಿ ತಮ್ಮ ಮಾರ್ಗದರ್ಶಕರಾಗಿದ್ದ ಪ್ರೊ. ಚಾರ್ಲ್ಸ್ ಮಿಸ್ನರ್ ಅವರ ಸೂಚನೆಯಂತೆ ಕಪ್ಪು ರಂಧ್ರಗಳ ಕುರಿತು ಸಂಶೋಧನೆ ನಡೆಸಿದ್ದರು. ನಮಗೆ ದೊರಕುವ, ಕಪ್ಪು ರಂಧ್ರದ ಕಡೆಯಿಂದ ಬರುತ್ತಿರುವ ಅಲೆಗಳು ಸ್ಥಿರ ಕಂಪನಾಂಕವನ್ನು ಹೊಂದಿದ್ದು, ಅವುಗಳ ಪಾರ (ಆಯಂಪ್ಲಿಟ್ಯೂಡ್) ಮಾತ್ರ ಕಡಿಮೆ ಆಗುತ್ತಾ ಹೋಗುತ್ತದೆ (ಕ್ವಾಸಿ ನಾರ್ಮಲ್ ಮೋಡ್ಸ್) ಎಂಬುದನ್ನು ನಿರೂಪಿಸಿದ್ದರು.
  • ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಹಲವು ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
  • ಜವಾಹರಲಾಲ್ ನೆಹರೂ ತಾರಾಲಯದ ಸಂಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಶಾಸ್ತ್ರೀಯ ಸಂಗೀತದ ಬಗೆಗೂ ಅವರಿಗೆ ಆಳವಾದ ಜ್ಞಾನವಿತ್ತು. ‘ಐನ್ಸ್ಟೈನ್ಸ್ ಎನಿಗ್ಮಾ’ (ಬ್ಲ್ಯಾಕ್ ಹೋಲ್ಸ್ ಇನ್ ಮೈ ಬಬಲ್ ಬಾತ್) ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದರು. ಕನ್ನಡದಲ್ಲೂ ಅವರು ವಿಜ್ಞಾನ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದರು.

ಭಾರತದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ ನಿಧನ

ಭಾರತದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ ಅವರು ಗುರುವಾರ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

67 ವರ್ಷದ ಅಲೆಕ್ಸಾಂಡರ್ ಕಡಕಿನ್ ಅವರು ಇಂದು ಬೆಳಗ್ಗೆ ಬರವಣಿಗೆಯಲ್ಲಿ ತೊಡಗಿದ್ದಾಗಲೇ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಅವರ ಸಾವಿನ ಕುರಿತಂತೆ ಅವರ ಕಚೇರಿ ಮೂಲಗಳು ಯಾವುದೇ  ಮಾಹಿತಿ ನೀಡಿಲ್ಲ. ಈ ಹಿಂದೆಯೂ ಕೂಡ ಕಡಕಿನ್ ಅವರು ಸಾಕಷ್ಟು ಬಾರಿ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಅದನ್ನು ರಷ್ಯಾ ಪರವಾಗಿ ಸಮರ್ಥಿಸಿಕೊಂಡಿದ್ದ ಕಡಕಿನ್ ಅವರು, ಯಾವುದೇ ದೇಶಕ್ಕೆ ತನ್ನ ಬಾಹ್ಯ ಬೆದರಿಕೆಗಳನ್ನು ನಿರ್ವಹಿಸುವ  ಅಥವಾ ನಿಗ್ರಹಿಸುವ ಹಕ್ಕಿದೆ ಎಂದು ಹೇಳಿದ್ದರು. ಅಂತೆಯೇ ಭಾರತದಲ್ಲಿ ನಡೆಯುತ್ತಿರುವ ಬಹುತೇಕ ಉಗ್ರ ದಾಳಿಗಳಿಗೆ ಪಾಕಿಸ್ತಾನ ಮೂಲದ ಉಗ್ರರೇ ಕಾರಣ ಎಂದು ಹೇಳಿದ್ದರು. ಅಂತೆಯೇ  ಈ ಹಿಂದೆ ರಷ್ಯಾ ದೇಶ ಪಾಕಿಸ್ತಾನ  ಸೇನೆಯೊಂದಿಗೆ ಸಮರಾಭ್ಯಾಸ ನಡೆಸಿದ್ದಾಗ ಭಾರತ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಆಗ ಭಾರತವನ್ನು ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿಯಲ್ಲಿ ಸಮಾಧಾನ ಪಡಿಸಿದ್ದ ಕಡಕಿನ್ ಅವರು, ರಷ್ಯಾ ಮತ್ತು ಪಾಕಿಸ್ತಾನ ಜಂಟಿ

ವಿಕಲಚೇತನರ ಹಕ್ಕು ಕಾಯಿದೆ ಅನುಷ್ಟಾನಕ್ಕೆ ನಿಯಮ ರೂಪಿಸಲು ಸಮಿತಿ ರಚನೆ

ವಿಕಲಚೇತನರ ಹಕ್ಕು ಕಾಯಿದೆ-2016 ಅನುಷ್ಟಾನದಲ್ಲಾಗುವ ವಿಳಂಬವನ್ನು ತಡೆಯುವ ಸಲುವಾಗಿ ದೇಶದಾದ್ಯಂತ ಏಕರೂಪ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ವಿಕಲಚೇತನರ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು ಮೂರು ತಿಂಗಳೊಳಗೆ ವರದಿಯನ್ನು ಸಲ್ಲಿಸಲಿದೆ.

ಸಮಿತಿಯ ರಚನೆ:

  • ಕೇಂದ್ರ ಆರೋಗ್ಯ ಸಚಿವಾಲಯ, ಕಾರ್ಮಿಕ ಸಚಿವಾಲಯ, ಹಾಗೂ ಸರ್ಕಾರೇತರ ಸಂಸ್ಥೆ (NGO)ಗಳ ಪ್ರತಿನಿಧಿಗಳು ಸಮಿತಿಯ ಸದಸ್ಯರಾಗಿರಲಿದ್ದಾರೆ.
  • ಅಲ್ಲದೇ ಕರ್ನಾಟಕ, ಗುಜರಾತ್, ಓಡಿಶಾ, ಅಸ್ಸಾಂ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳು ಸಹ ಸದಸ್ಯರಾಗಿ ಇರಲಿದ್ದಾರೆ,

ಸಮಿತಿಯ ಹೊಣೆಗಾರಿಕೆ:

  • ದೇಶದಾದ್ಯಂತ ಕಾಯಿದೆಯ ಅನುಷ್ಟಾನಕ್ಕೆ ಮಾದರಿ ಏಕರೂಪ ನಿಯಮಗಳನ್ನು ರೂಪಿಸುವುದು. ಆ ಮೂಲಕ ಕಾಯಿದೆಯ ಅನುಷ್ಟಾನದಲ್ಲಾಗುವ ವಿಳಂಬವನ್ನು ತಡೆಯುವುದು.

ವಿಕಲಚೇತನರ ಹಕ್ಕು ಕಾಯಿದೆ-2016:

  • ವಿಕಲಚೇತನರ ಹಕ್ಕು ಕಾಯಿದೆ ರಾಷ್ಟಪತಿ ರವರಿಂದ ಅಂಕಿತ ಪಡೆದ ನಂತರ ಡಿಸೆಂಬರ್ 2016 ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ದೈಹಿಕ ಮತ್ತು ಮಾನಸಿಕ ನ್ಯೂನತೆ ಸೇರಿದಂತೆ ವಿವಿಧ ನ್ಯೂನತೆಗಳನ್ನು ಕಾಯಿದೆಯಡಿ ತರಲಾಗಿದೆ.
  • ಈ ಕಾಯಿದೆಯಡಿ ಈ ಹಿಂದೆ ಇದ್ದ 7 ನ್ಯೂನತೆಗಳ ಬದಲಿಗೆ 21 ನ್ಯೂನತೆಗಳನ್ನು ಅಂಗವೈಕಲ್ಯತೆ ಎಂದು ಪರಿಗಣಿಸಲಾಗಿದೆ.

ಕರಡು ಉಕ್ಕು ನೀತಿ-2017 ಬಿಡುಗಡೆ: ರೂ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ

ಉಕ್ಕು ಸಚಿವಾಲಯ ಕರಡು ಉಕ್ಕು ನೀತಿ-2017 ಬಿಡುಗಡೆಗೊಳಿಸಿದ್ದು, ರೂ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗಿದೆ. ಅಲ್ಲದೇ ದೇಶಿಯ ಉಕ್ಕು ಉತ್ಪಾದನೆ ಸಾಮರ್ಥ್ಯವನ್ನು 2030-31ರ ವೇಳೆಗೆ 300 ಮಿಲಿಯನ್ ಟನ್ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಇದರಿಂದ 11 ಲಕ್ಷ ಹೊಸ ಹುದ್ದೆ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ನೀತಿಯ ಪ್ರಮುಖಾಂಶಗಳು:

  • ಎರಡು ಪ್ರಮುಖ ಗುರಿ: ಜಾಗತಿಕವಾಗಿ ಸ್ಪರ್ಧೆಯನ್ನು ಒಡ್ಡುವ ಉಕ್ಕು ಉತ್ಪಾದನೆ ಉದ್ದಿಮೆಯನ್ನು ಸೃಷ್ಟಿಸುವುದು ಹಾಗೂ ತಾಂತ್ರಿಕವಾಗಿ ಮುಂದುವರೆದ, ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ಸ್ವಾಲಂಭಿಯಾದ ಉಕ್ಕಿನ ಉದ್ಯಮವನ್ನು ರಚಿಸುವುದು.
  • ಅಧಿಕ ಬಂಡವಾಳ, ಆಮದು ಅವಲಂಭನೆ, ಕಚ್ಚಾ ವಸ್ತುಗಳು ಹಾಗೂ ಆರ್ಥಿಕ ಒತ್ತಡ ಉಕ್ಕು ಕ್ಷೇತ್ರದ ಅಭಿವೃದ್ದಿಯನ್ನು ಕುಂಠಿತಗೊಳಿಸಿವೆ. ಇವುಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಲಾಗಿದೆ.
  • ಗ್ಯಾಸ್ ಆಧರಿತ ಉಕ್ಕು ಘಟಕ: ಗ್ಯಾಸ್ ಆಧರಿತ ಹಾಗೂ ವಿದ್ಯುತ್ ಕುಲುಮೆ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿ, ಕಲ್ಲಿದ್ದಲ್ಲಿನ ಆಮದಿನ ಮೇಲೆ ಅವಲಂಭನೆಯನ್ನು ಕಡಿಮೆಗೊಳಿಸಿ ಉಕ್ಕು ಉತ್ಪಾದನೆಯ ವೆಚ್ಚವನ್ನು ಕಡಿಮೆಗೊಳಿಸುವುದು.
  • ಕರಾವಳಿ ತೀರಾದಲ್ಲಿ ಹಸಿರುವಲಯ ಉಕ್ಕುಘಟಕಗಳು: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಸಾಗರಮಾಲ ಯೋಜನೆಯಡಿ ಈ ಉಕ್ಕುಘಟಕಗಳನ್ನು ಅಭಿವೃದ್ದಿಪಡಿಸಿ ಅಗ್ಗದ ಕಲ್ಲಿದ್ದಲ್ಲನ್ನು ಬಳಸಿ ರಫ್ತುನ್ನು ಹೆಚ್ಚಿಸುವುದು.

One Thought to “ಪ್ರಚಲಿತ ವಿದ್ಯಮಾನಗಳು-ಜನವರಿ-23, 2017”

  1. Nagendra

    Sir how can I download this

Leave a Comment

This site uses Akismet to reduce spam. Learn how your comment data is processed.